ವಿಜಯನಗರ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಶಾಲಾ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದ ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ನಡೆದಿದೆ.
ಬಸ್ಸಮ್ಮ ಅಲಿಯಾಸ್ ರೂಪ(34) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ವರದಕ್ಷಿಣೆ ಕಿರುಕುಳ ಸಾವಿಗೆ ಕಾರಣ ಎಂದು ಶಂಕೆ ವ್ಯಕ್ತವಾಗಿದ್ದು, ಗಂಡ ಅರ್ಜುನ್, ಅತ್ತೆ ಅಂಬಿಕಾ, ನಾದಿನಿ ಸಂಗೀತ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಅರ್ಜುನ್ ಕುಟುಂಬದ ಒಡೆತನಕ್ಕೆ ಸೇರಿದ ನ್ಯಾಷನಲ್ ಶಾಲೆಯಲ್ಲಿ ರೂಪ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವರದಕ್ಷಿಣೆ ಕಿರುಕುಳಕ್ಕೆ ಶಾಲಾ ಕೊಠಡಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರವಿವಾರ ಕೆಲಸದ ನೆಪದಲ್ಲಿ ಶಾಲೆಗೆ ಬಂದು ಬಸ್ಸಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಸ್ಸಮ್ಮ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.
ಗಂಡ-ಹೆಂಡತಿ ಇಬ್ಬರೂ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹತ್ತು ವರ್ಷಗಳ ಹಿಂದೆ ಬಸ್ಸಮ್ಮ ಮತ್ತು ಅರ್ಜುನ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವರದಕ್ಷಿಣೆ ಕಿರುಕುಳ ಆಕೆಯ ಸಾವಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.