ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದೆ. ತಕ್ಷಣವೇ ಮಹಿಳೆ ಜೋರಾಗಿ ಕೂಗಾಡಿದ್ದಾರೆ. ಇದರಿಂದ ಹೆದರಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಶಿವಮೊಗ್ಗದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ವಸತಿ ಗೃಹದ ಬಳಿ ಇಂದು ಬೆಳ್ಳಂಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ. ಬೆಳಗ್ಗೆ ವಸತಿ ಗೃಹದ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಮೇಲೆ ಚಿರತೆ ಎಗರಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ,ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಮಹಿಳೆಯ ಹೆಗಲಿಗೆ ಚಿರತೆ ಪರಚಿದೆ. ತಕ್ಷಣ ಮಹಿಳೆ ಜೋರಾಗಿ ಕೂಗಿಕೊಂಡ ಪರಿಣಾಮ ಚಿರತೆ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಐಎಸ್ಎಲ್ನ ಸಾಕಷ್ಟು ವಸತಿಗೃಹಗಳು ಖಾಲಿಯಾಗಿವೆ. ಅಲ್ಲದೇ ಜನರ ಓಡಾಟ ಕಡಿಮೆಯಾದ ಪರಿಣಾಮ ಸಾಕಷ್ಟು ಗಿಡಮರಗಳು ಬೆಳೆದು ನಿಂತಿವೆ. ಪರಿಣಾಮ ಚಿರತೆ ಇಲ್ಲಿ ವಾಸವಾಗಿರಬಹುದು ಅಥವಾ ಬಂದು ಹೋಗುತ್ತಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಚಿರತೆ ಹಿಡಿಯುವ ಕಾರ್ಯದಲ್ಲಿ ತೂಡಗಿದ್ದಾರೆ. ಸದ್ಯ ಈ ಸ್ಥಳದಲ್ಲಿ ಜನರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.