ವಿಟ್ಲ: ಇಲ್ಲಿನ ಸರಕಾರಿ ಆಸ್ಪತ್ರೆ-ದೇವಸ್ಥಾನ ಸಂಪರ್ಕ ರಸ್ತೆಯಲ್ಲಿ ದೂರವಾಣಿ ಕಛೇರಿ ಸಮೀಪ ನಿಯಮ ಬಾಹಿರವಾಗಿ ಯಾವ ಇಲಾಖೆಗಳಿಗೂ ಮಾಹಿತಿ ನೀಡದೇ ಎರಡು ರೋಡ್ ಹಂಪ್ಸ್ ನಿರ್ಮಿಸಲಾಗಿದ್ದು ಸವಾರರ ಪ್ರಾಣಕ್ಕೆ ಕಂಕಟವಾದ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಪ್ರಕಾರ ಕರಾವಳಿ ಪ್ರಾಧಿಕಾರವು ರಸ್ತೆ ನಿರ್ಮಾಣದ ವೇಳೆ ಹಂಪ್ ನಿರ್ಮಾಣ ಮಾಡಿದೆ.
ಎಲ್ಲಾ ಹಂಪ್ಸ್ಗಳಿಗಿಂತ ಇಲ್ಲಿನ ಹಂಪ್ಸ್ ಸ್ವಲ್ಪ ಎತ್ತರ ಜಾಸ್ತಿಯೇ ಇದ್ದು ಸವಾರರಿಗೆ ತೊಂದರೆಯುಂಟುಮಾಡಿದೆ. ಹಂಪ್ಸ್ ಹಾಕುವ ವೇಳೆ ಸವಾರರಿಗೆ ಮುನ್ಸೂಚನೆ ಎಂಬಂತೆ ಸಿಗ್ನಲ್ ಬೋರ್ಡ್, ರಸ್ತೆಗಳಲ್ಲಿ ಬಿಳಿ ಮಾರ್ಕ್ ಹಾಕುವುದು ಸಾಮಾನ್ಯ. ಆದರೆ ರಸ್ತೆ ನಿಯಮಗಳನ್ನು ಗಾಳಿಗೆ ತೂರಿರುವುದು ಸವಾರರ ಪ್ರಾಣಕ್ಕೆ ಆಪತ್ತು ಉಂಟುಮಾಡಿದೆ.
ಪ್ರತಿನಿತ್ಯ ಸರಕಾರಿ ಆಸ್ಪತ್ರೆಗೆ ಅನಾರೋಗ್ಯ ಪೀಡಿತರನ್ನು ತುರ್ತುವಾಹನಗಳಲ್ಲಿ ತಲುಪಿಸಬೇಕಾಗಿದ್ದ ಪ್ರಮುಖ ಒಳರಸ್ತೆ ಇದಾಗಿದೆ. ಮುಖ್ಯರಸ್ತೆಯಲ್ಲಿ ದಿನವಿಡೀ ಟ್ರಾಫಿಕ್ ಜಾಮ್ ಆಗುತ್ತಿರುವ ಕಾರಣ ಇದೇ ಒಳರಸ್ತೆಯನ್ನು ಅಂಬ್ಯುಲೆನ್ಸ್ ವಾಹನಗಳು ರೋಗಿಯ ಪ್ರಾಣ ರಕ್ಷಿಸುವುದಕ್ಕಾಗಿ ಅವಲಂಬಿಸಿವೆ. ಆದರೆ ಇತ್ತೀಚಿಗೆ ಅಕ್ರಮ ಹಾಗೂ ನಿಯಮ ಬಾಹಿರವಾಗಿ ಎರಡು ಕಾಂಕ್ರೀಟ್ ಹಂಪ್ಸ್ ಅಳವಡಿಸಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಿರುವು ರಸ್ತೆಯಲ್ಲಿ ಹಂಪ್ಸ್ ಹಾಕಿದ್ದರಿಂದಾಗಿ ಈಗಾಗಲೇ ಎಂಟಕ್ಕೂ ಹೆಚ್ಚು ಅಪಘಾತಗಳಾಗಿ ಸವಾರರು ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿ ವಿಟ್ಲದ ಸವಾರರಿಬ್ಬರು ಗಂಭೀರ ಗಾಯಗೊಂಡು ಮೂಳೆ ಮುರಿದುಕೊಂಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಅಲ್ಲಿನ ಜನಪ್ರತಿನಿಧಿಗಳಲ್ಲಿ ಮಾಹಿತಿ ಕಲೆ ಹಾಕಿದಾಗ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಹಾಗದ್ರೆ ಸಾರ್ವಜನಿಕ ರಸ್ತೆಯಲ್ಲಿ ಹಂಪ್ಸ್ ಹಾಕಿರುವುದು ಯಾರು ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತಕ್ಷಣವೇ ನಿಯಮ ಬಾಹಿರ ಹಂಪ್ಸ್ ಗಳನ್ನು ತೆರವುಗೊಳಿಸಿ ವಾಹನ ಸವಾರರ, ಅನಾರೋಗ್ಯ ಪೀಡಿತರ ಪ್ರಾಣ ರಕ್ಷಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.