ವಿಟ್ಲ: ಮೊಟ್ಟೆ ತರಲು ಅಂಗಡಿಗೆ ತೆರಳಿದ್ದ ವ್ಯಕ್ತಿಯೋರ್ವರಿಗೆ ಮೂವರು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಹಲ್ಲೆಗೈದ ಘಟನೆ ಪುಣಚ ಗ್ರಾಮದ ಪರಿಯಳ್ತಡ್ಕ ಎಂಬಲ್ಲಿ ನಡೆದಿದೆ.
ಆದರ್ಶ, ರಾಕೇಶ್, ಕೃಷ್ಣಪ್ಪ ಆರೋಪಿಗಳು.
ಘಟನೆ ವಿವರ:
15 ದಿನಗಳ ಹಿಂದೆ ಪುಣಚ ಗ್ರಾಮದ ಪರಿಯಳ್ತಡ್ಕ ನಿವಾಸಿ ಪಿಜಿನ ಎಂಬವರು ಪರಿಯಲ್ತಡ್ಕದಲ್ಲಿರುವ ಸಂತೋಷರವರ ಕೋಳಿ ಅಂಗಡಿಗೆ ಮೊಟ್ಟೆ ತರಲು ಹೋದ ವೇಳೆ ಅಂಗಡಿಯಲ್ಲಿ ಕುಳಿತ್ತಿದ್ದ ಆದರ್ಶ ಎಂಬಾತನಲ್ಲಿ ನೀನು ಯಾಕೆ ಇದೇ ಅಂಗಡಿಯಲ್ಲಿ ಪಡಾರಿ ಬಿದ್ದಿರುತ್ತಿ ನಿನಗೆ ಬೇರೆ ಕೆಲಸ ಇಲ್ಲವಾ ಎಂದು ತಮಾಷೆಯಾಗಿ ಹೇಳಿದ್ದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆದರ್ಶ ಇದೇ ದ್ವೇಷದಿಂದ ನ.3 ರಂದು ಪಿಜಿನರವರು ಖರೀದಿಸಿದ ಮೊಟ್ಟೆಯ ಹಣವನ್ನು ನೀಡಿ ವಾಪಸು ಮನೆಗೆ ತೆರಳುತ್ತಿದ್ದ ವೇಳೆ ಆದರ್ಶನು ಪಿಜಿನರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೆಳಕ್ಕೆ ದೂಡಿದ್ದು, ಮಾತ್ರವಲ್ಲದೇ ರಾಕೇಶ್ ಮತ್ತು ಕೃಷ್ಣಪ್ಪ ಎಂಬವರು ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಪಿಜಿನರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪಿಜಿನರವರು ನೀಡಿದ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ: 504,323,506 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(ಎಸ್),3(2)(ವಿಎ) ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.