


ಹುಣಸೂರು : ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ನಗರದಲ್ಲಿ ನಡೆದಿದೆ.
ಮೃತರನ್ನು ನಿಶ್ಚಿತ(37), ನಿಕ್ಷಾ(13), ರಕ್ಷಾ(6) ಮತ್ತು ತಂದೆ ಹರೀಶ್(42) ಎಂದು ಹೇಳಲಾಗುತ್ತಿದೆ.

ಹರೀಶ್ ಈ ಕೃತ್ಯ ಎಸಗುವ ಮುನ್ನ ವ್ಯವಸ್ಥಿತವಾಗಿ ಸ್ಕೆಚ್ ಹಾಕಿದ್ದ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಮನೆಯಲ್ಲಿ ಹರೀಶ್ ತಾಯಿ ಕೂಡ ವಾಸವಾಗಿದ್ದರು. ಮೂರು ದಿನಗಳ ಹಿಂದೆಯೇ ಹರೀಶ್ ತನ್ನ ತಾಯಿಯನ್ನು ಅಜ್ಜಿ ಮನೆಗೆ ಕಳುಹಿಸಿಕೊಟ್ಟಿದ್ದ. ಮನೆಯಲ್ಲಿ ತಾಯಿ ಇಲ್ಲದ ಸಮಯ ನೋಡಿಕೊಂಡು ಈ ಘೋರ ಕೃತ್ಯ ಎಸಗಿದ್ದಾನೆ.
ಎಂದಿನಂತೆ ಸೋಮವಾರ ರಾತ್ರಿ ಮನೆಗೆ ಬಂದ ಹರೀಶ್, ಹೆಂಡತಿ ಮತ್ತು ಇಬ್ಬರ ಮಕ್ಕಳ ಬಾಯಿಗೆ ಪ್ಲಾಸ್ಟರ್ ಹಾಕಿ ಉಸಿರುಗಟ್ಟಿಸಿ ಸಾಯಿಸಿ ನಂತರ ತಾನು ಮೇಲಿನ ಮಹಡಿಗೆ ತೆರಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಒಂದು ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಏನಿದೆ ಎಂಬುದು ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.








