ವಿಟ್ಲ: ಜನಶಿಕ್ಷಣ ಟ್ರಸ್ಟ್, ಗ್ರಾಮ ಪಂಚಾಯತ್, ಸುಗ್ರಾಮ ಜಾಗೃತಿ, ಆರೋಗ್ಯ ಇಲಾಖೆ, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ವೇದಿಕೆ ಸಭೆಯು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿರಪದವಿನಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಕೃಷ್ಣ ಪೂಜಾರಿಯವರು ಮಹಿಳಾ ದೌರ್ಜನ್ಯವನ್ನು ತಡೆಗಟ್ಟಬೇಕೆಂದರೆ ನಮ್ಮ ಮನೆಯ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸಬೇಕು…ಮಕ್ಕಳ ಪ್ರತಿಯೊಂದು ಚಟುವಟಿಕೆಯಲ್ಲಿ ಹೆತ್ತವರು ಗಮನಹರಿಸಬೇಕು. ಮನೆಯಲ್ಲಿ ಆಗುವ ಸಣ್ಣ ಪುಟ್ಟ ಗಲಾಟೆಗಳನ್ನು ಸರಿಯಾಗಿ ವಿಚಾರಿಸಿ ಅದನ್ನು ಮನೆಯವರೇ ಸರಿಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜನಶಿಕ್ಷಣ ಟ್ರಸ್ಟ್ ನ ಸಂಯೋಜಕ ಚೇತನ್ ಕುಮಾರ್ ಇವರು ಮಹಿಳೆಯರಿಗೆ ಟ್ರಸ್ಟ್ ನಿಂದ ಹಾಗೂ ಗ್ರಾಮ ಪಂಚಾಯತ್ ನಿಂದ ಸಿಗುವ ಸೌಲಭ್ಯಗಳು ಹಾಗೂ ಜೀವನ ನಿರ್ವಹಣೆಗೆ ಉಪಯುಕ್ತವಾಗುವ ಸ್ವ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಆ ಬಳಿಕ ಕಾರ್ಯಕ್ರಮದಲ್ಲಿ ಮಹಿಳಾ ಸಾಂತ್ವಾನ ಕೇಂದ್ರ ಬಂಟ್ವಾಳ ಇದರ ಆಪ್ತ ಸಮಾಲೋಚಕಿ ಶ್ರೀಮತಿ ಗೀತಾ ಇವರು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿ ಇದಕ್ಕಾಗಿ ಮಹಿಳಾ ಸಾಂತ್ವನ ಕೇಂದ್ರ ಕೈ ಗೊಳ್ಳುವ ಕಾರ್ಯಕ್ರಮ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೆಬಿಸಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಲ್ಫ್ ಡಿಸೋಜ, ಸದಸ್ಯ ಶ್ರೀಮತಿ ಮಾಲತಿ, ಶ್ರೀಮತಿ ಲಲಿತಾ, ರಶ್ಮಿ ಹಾಗೂ ಪೆರುವಾಯಿ ಅರೋಗ್ಯ ಕೇಂದ್ರದ ಆಶಾಕಾರ್ಯ ಕರ್ತೆಯರಾದ ಶ್ರೀಮತಿ ರೇವತಿ, ಶ್ರೀಮತಿ ಸುರೇಖಾ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಶೋಧ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗೇಶ್ ಮಾಸ್ಟರ್ ಸೇರಿದಂತೆ ಗ್ರಾಮದ ಹಲವು ಮಹಿಳೆಯರು ಭಾಗವಹಿಸಿದರು.