ವಿಟ್ಲ: ಜಮೀನು ಪಾಲಿನ ತಕರಾರಿಗಾಗಿ ಸಂಬಂಧಿಕರ ನಡುವೆ ಪರಸ್ಪರ ಹಲ್ಲೆ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಮೇ 28 ರಂದು ಅಳಿಕೆ ಗ್ರಾಮದ ಬಾಬು ಮೂಲೆ ಎಂಬಲ್ಲಿ ನಡೆದಿದೆ.

ಮಂಜೇಶ್ವರ ಮೂಲದವರಾದ ಚರಣ್ ರಾಜ್ ಎಂಬವರು ಅಳಿಕೆ ಗ್ರಾಮದ ಬಾಬು ಮೂಲೆ ಎಂಬಲ್ಲಿ ತನ್ನ ಚಿಕ್ಕಪ್ಪ ಪರಮೇಶ್ವರ ನಾಯ್ಕರವರ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದು, ಪರಮೇಶ್ವರ ನಾಯ್ಕ ರವರಿಗೂ ಅವರ ಸಂಬಂಧಿ ಜನಾರ್ಧನ, ಆನಂದ ಹಾಗೂ ಜಯಶ್ರೀ ಎಂಬವರಿಗೆ ಜಮೀನು ಪಾಲಿನ ತಕರಾರು ನಡೆದಿತ್ತು.

ಈ ಕಾರಣದಿಂದ ಚರಣ್ ರಾಜ್ ರವರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಆರೋಪಿಗಳಾದ ಜನಾರ್ಧನ, ಆನಂದ ಹಾಗೂ ಜಯಶ್ರೀ ರವರು ಚರಣ್ ರಾಜ್ ರವರಿಗೆ ಕೈಯಿಂದ ಹೊಡೆದು ದೂಡಿ ಹಾಕಿ ಆ ಸಮಯದಲ್ಲಿ ಆನಂದನು ಒಂದು ಕತ್ತಿಯಿಂದ ಅವರ ಬಲ ಕೈಗೆ ಕಡಿದು ಗಾಯ ಪಡಿಸಿದ್ದಾನೆ.

ಆ ಸಂದರ್ಭದಲ್ಲಿ ಚರಣ್ ರಾಜ್ ರವರ ಚಿಕಪ್ಪ ಸುರೇಶ್ ನಾಯ್ಕ ರವರು ಬಿಡಿಸಲು ಬಂದಾಗ ಆರೋಪಿಗಳು ಕೈಯಿಂದ ಸುರೇಶ್ ನಾಯ್ಕ ರವರ ಮೇಲೆ ಹಲ್ಲೆ ನಡೆಸಿ ಮೂಗಿನ ಭಾಗಕ್ಕೆ ಗಾಯಪಡಿಸಿದ್ದು, ಅಲ್ಲದೇ ಆರೋಪಿಗಳು ಚರಣ್ ರಾಜ್ ಮತ್ತು ಸುರೇಶ್ ನಾಯ್ಕ ರಿಗೆ ಜೀವ ಬೆದರಿಕೆ ಹಾಕಿದ್ದಾರೆ.

ಬಳಿಕ ಗಾಯಗೊಂಡ ಚರಣ್ ರಾಜ್ ಮತ್ತು ಸುರೇಶ್ ನಾಯ್ಕ ರವರು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









