ವಿಟ್ಲ: ಹಿಂದೂ ರುದ್ರಭೂಮಿ ರಕ್ಷಣಾ ಹೋರಾಟ ಸಮಿತಿ, ಬಾಳೆಕೋಡಿ ಕನ್ಯಾನ ಇದರ ವತಿಯಿಂದ ಕನ್ಯಾನದಲ್ಲಿ ಹಿಂದೂ ರುದ್ರಭೂಮಿಯ ಉಳಿವಿಗಾಗಿ ಪ್ರತಿಭಟನೆ ಜಾಥಾ ಹಮ್ಮಿಕೊಂಡಿದೆ. ಜನವರಿ 23ನೇ ಸೋಮವಾರದಂದು ಕನಾನ್ಯ ಶ್ರೀ ರಾಘವೇಂದ್ರ ಭಜನಾ ಮಂದಿರದಿಂದ ಕನ್ಯಾನ ಗ್ರಾಮ ಪಂಚಾಯತ್ಗೆ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ಯಾನ ಗ್ರಾಮದಲ್ಲಿ ಸುಮಾರು 6,000 ಕ್ಕಿಂತಲೂ ಅಧಿಕವಾಗಿ ಜನಸಂಖ್ಯೆ ಇರುವುದರಿಂದ ಈ ಗ್ರಾಮಕ್ಕೊಂದು ಹಿಂದೂ ರುದ್ರ ಭೂಮಿಯ ಅತಿ ಅಗತ್ಯತೆ ಇದೆ. ಸರಿ ಸುಮಾರು 30 ವರ್ಷಗಳ ಹಿಂದೆ ಹಿಂದೂ ರುದ್ರಭೂಮಿಗಾಗಿ ಎರಡು ಕಾಲು ಎಕರೆ ಭೂಮಿಯನ್ನು ಕಾಯಿದಿರಿಸಲಾಗಿತ್ತು. ಅಲ್ಲಿ ದಹನಕ್ಕೂ ದಫನಕ್ಕೂ ಅವಕಾಶವಿರುವುದರಿಂದ ಕಾಯ್ದಿರಿಸಲಾಗಿರುವಂತಹ ಎರಡು ಕಾಲು ಎಕರೆ ಕೂಡ ಸಾಕಾಗುವುದಿಲ್ಲ. ಕನಿಷ್ಠ 5 ಎಕರೆಯಾದರೂ ಭೂಮಿಯ ಅಗತ್ಯತೆ ಇದೆ. ಆದರೂ ಈಗಿರುವ ಹಿಂದೂ ರುದ್ರ ಭೂಮಿಯನ್ನಾದರೂ ಉಳಿಸಬೇಕಾಗಿರುವುದು ಹಿಂದುಗಳ ಕರ್ತವ್ಯವಾಗಿದೆ.
ಜನವರಿ 23 ಸೋಮವಾರ ಬೆಳಗ್ಗೆ ೮:೩೦ ಗಂಟೆಗೆ ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಪೆರುವಾಯಿ, ಮಾಣಿಲ, ಕರೋಪಾಡಿ, ಅಳಿಕೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಬೆಳಗ್ಗೆ ಕನಾನ್ಯ ಶ್ರೀ ರಾಘವೇಂದ್ರ ಭಜನಾ ಮಂದಿರದಿಂದ ಕನ್ಯಾನ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಪುತ್ತೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಸಹ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ ಸೇರಿದಂತೆ, ಬಜರಂಗದಳ, ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಭಾಗಿಯಾಗಲಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿಯವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.