ವಿಟ್ಲ: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರಾವಳಿ ಕಕ್ಕಾಬಿಕ್ಕಿಯಾಗಿದೆ. ಅಲ್ಲಲ್ಲಿ ಗುಡ್ಡಕುಸಿತ, ಸೇತುವೆ ಮುಳುಗಡೆ, ರಸ್ತೆಗಳು ಜಲಾವೃತವಾಗುತ್ತಿದೆ. ಅಂತೆಯೇ ಪುಣಚ ಗ್ರಾಮದ ದೇವಿನಗರ ಕಲ್ಲಾಜೆ ಅಜೇರು ರಸ್ತೆಯ ಮಡ್ಯಾರ ಬೆಟ್ಟು ಎಂಬಲ್ಲಿ ಸೇತುವೆಯು ಮಳೆಗೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಈ ರಸ್ತೆಯು ದೇವಿನಗರ ಕಲ್ಲಾಜೆ ಅಜೇರು ತೋರಣಕಟ್ಟೆಯಾಗಿ ಸಾರಡ್ಕಕ್ಕೆ ಸಂಪರ್ಕಿಸುತ್ತದೆ. ಅಂತೆಯೇ ದೇವಿನಗರ ಕಲ್ಲಾಜೆ ಆಜೇರು ಸಾಜ ಬುಳ್ಳೇರಿಕಟ್ಟೆಯಾಗಿ ಪುತ್ತೂರಿಗೆ ಸೇರುತ್ತದೆ.
2013 / 2014ರಲ್ಲಿ 3 ಲಕ್ಷ ಜಿಲ್ಲಾ ಪಂಚಾಯತ್ ಅನುದಾನ ಮತ್ತು 5 ಲಕ್ಷ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಯಾಗಿ ನಿರ್ಮಾಣವಾದ ಸೇತುವೆ ಎರಡು ಬದಿಗೆ ಕಗ್ಗಲ್ಲಿನ ತಡೆಗೋಡೆ ಕಟ್ಟಿ 4ಫೀಟ್ ನ 2ಸಾಲು ಸಿಮೆಂಟ್ ಪೈಪ್ ಗಳನ್ನು ಹಾಕಿ ಸೇತುವೆಯ ಮೇಲಿನ ಗುಡ್ಡದಿಂದ ಸೇತುವೆಯ ನಡುವೆ ಮಣ್ಣು ತುಂಬಿಸಿ ಸಂಚಾರಕ್ಕೆ ಯೋಗ್ಯವಾಗುವಂತೆ ಸಂಪರ್ಕ ಕಲ್ಪಿಸಲಾಗಿತ್ತು.
ಕಳಪೆ ಕಾಮಗಾರಿಯ ಆರೋಪ..!
ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಗುತ್ತಿದಾರರಿಗೆ 6 ಫೀಟ್ ನ 2 ಸಾರಿ ಸಿಮೆಂಟ್ ಪೈಪ್ ಗಳನ್ನು ಹಾಕಲು ಹೇಳಿಯೂ ಅವರು 4 ಫೀಟ್ ನ 2ಸಾರಿ ಪೈಪ್ ಗಳನ್ನು ಹಾಕಿದ್ದು ಹೆಚ್ಚಿನ ನೀರಿನ ಸೆಳೆತ ಜಾಸ್ತಿ ಇದ್ದುದರಿಂದ ನೀರು ಪೈಪ್ನಲ್ಲಿ ಹೋಗದೆ ಪಕ್ಕದ ತೋಟದಲ್ಲಿ ಹೋಗುತ್ತಿತ್ತು. ಪ್ರಸ್ತುತ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಬಂದು ನೀರು ಹರಿದು ಹೋಗಲು ಅವಕಾಶವಿಲ್ಲದೆ ಸಂಪರ್ಕವಿಲ್ಲದ ರಸ್ತೆಯಾಗಲು ಕಳಪೆ ಕಾಮಗಾರಿ ಕಾರಣವಾಗಿರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದರಿಂದಾಗಿ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದಾಗಿದೆ ಅಲ್ಲದೆ ಆಜೇರು, ಮಲ್ಯ ಅನಗುಡ್ಡೆ ಸಾರ್ಯ ಮತ್ತಿತರ ಭಾಗದ ಜನರಿಗೆ ಪೇಟೆಗೆ ಬರಲು ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಕೂಡಲೇ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರದ ವ್ಯವಸ್ಥೆಯನ್ನು ಮಾಡಿಸಿಕೊಡುವಂತೆ ಆಜೇರು ಜನತೆಯು ಆಗ್ರಹಿಸಿದೆ.