ವಿಟ್ಲ: ರಸ್ತೆಯಲ್ಲಿ ಆದ ಹೊಂಡದಿಂದ ವಾಹನ ಸವಾರರು ಹಾಗೂ ಸ್ಥಳೀಯರು ತೊಂದರೆ ಅನುಭವಿಸುತ್ತಿರುವ ಘಟನೆಗೆ ಸಂಬಂಧಿಸಿ ಸ್ಥಳೀಯರ ಮಾಹಿತಿಯಂತೆ ವಿಟಿವಿ ವರದಿ ಪ್ರಸಾರ ಮಾಡಿತ್ತು. ವರದಿ ಎಚ್ಚೆತ್ತುಕೊಂಡು ಸಂಬಂಧಪಟ್ಟ ಇಲಾಖೆ ರಸ್ತೆಯನ್ನು ರಿಪೇರಿ ಮಾಡಲು ಮುಂದಾಗಿದೆ. ಸ್ಥಳಕ್ಕೆ ಜೆಸಿಬಿ ಬಂದಿದ್ದು ಗುಂಡಿ ಮುಚ್ಚಿವ ಕಾರ್ಯ ನಡೆಯುತ್ತಿದೆ.
ವಿಟ್ಲ ಮಂಗಳೂರು ರಸ್ತೆಯ ಮಂಗಿಲಪದವು ಸಮೀಪದ ಪಾತ್ರತೋಟ ಎಂಬಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಮೋರಿ ಹಾಕಿದ್ದು ಈ ವೇಳೆ ಹಾಕಿದ ಡಾಂಬಾರು ಸಂಪೂರ್ಣವಾಗಿ ಎದ್ದು ಹೋಗಿದೆ. ಇದರಿಂದ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರು ಹಾಗೂ ಸ್ಥಳೀಯರು ತೊಂದರೆ ಅನುಭವಿಸುವುದರ ಬಗ್ಗೆ ವಿಟಿವಿ ವರದಿ ಮಾಡಿತ್ತು. ಮತ್ತು PWD ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆಸಿತ್ತು.
ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಏಕಾಏಕಿ ಬ್ರೇಕ್ ಹಾಕುವುದರಿಂದ ಪಕ್ಕದಲ್ಲಿರುವ ಮನೆಯವರಿಗೆ ನಿದ್ದೆ ಇಲ್ಲದಂತಾಗಿದೆ. ದೊಡ್ಡ ವಾಹನಗಳು ಹೋಗುವಾಗ ಭೂಕಂಪ ಆಗುತ್ತಿದೆಯೋ ಏನೋ ಎಂಬ ಶಬ್ಧ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿ ಅನೇಕ ಸಲ ಅಪಘಾತವೂ ಸಂಭವಿಸಿದೆ. ಪ್ರತೀವಾರ ವಿಟ್ಲಕ್ಕೆ ಬರುವ ಆರ್ಟಿಓ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಇದೇ ರಸ್ತೆಯಾಗಿ ಬರುತ್ತಿದ್ದರೂ ಅವರಿಗೆ ಕಾಣದಂತಾಗಿದೆ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದ್ದರು.