ವಿಟ್ಲ: ವಿದ್ಯುತ್ ಲೈನ್ ವಿಚಾರವಾಗಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈ ಬಗ್ಗೆ ಇತ್ತಂಡಗಳು ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಬೆಳಕು ಯೋಜನೆಯಡಿ ವಿದ್ಯುತ್ ಲೈನ್ನನ್ನು ರಾಮ ನಾಯ್ಕರವರ ಜಮೀನಿನಲ್ಲಿ ಹಾದು ಹೋಗುವುದು ಈ ಜಗಳಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಎರಡೂ ತಂಡಗಳು ನೀಡಿದ ದೂರಿನನ್ವಯ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕರೋಪ್ಪಾಡಿ ಗ್ರಾಮದ ನಾರಾಯಣ ನಾಯ್ಕ್ ಎಂಬವರು ನೀಡಿದ ದೂರಿನನ್ವಯ ಸುರೇಶ್, ಸುನೀಲ್, ರೋಹಿತ್, ಕೃಷ್ಣ ನಾಯ್ಕ ಎಂಬವರ ಮೇಲೆ ದೂರು ದಾಖಲಾದರೆ, ಸಾಲೆತ್ತೂರು ವಚೆಂಬರಕಲ್ಲು ಲೀಲಾ ಅವರು ನೀಡಿದ ದೂರಿನ ಅನ್ವಯ ಕುಶ, ಲವ, ನಾರಾಯಣ ನಾಯ್ಕ, ಕೃಷ್ಣ ನಾಯ್ಕ್ ಎಂಬವರ ಮೇಲೆ ದೂರು ದಾಖಲಾಗಿದೆ.
ನಾರಾಯಣ ನಾಯ್ಕ್ ನೀಡಿದ ದೂರಿನ ಸಾರಾಂಶ
ನಾರಾಯಣ ನಾಯ್ಕ್ ಅವರ ತಮ್ಮ ಕುಶರವರು ಮನೆಗೆ ಸರ್ಕಾರದ ಬೆಳಕು ಯೋಜನೆಯಡಿ ವಿದ್ಯುತ್ ಲೈನ್ನನ್ನು ರಾಮ ನಾಯ್ಕರವರ ಜಮೀನಿಲ್ಲಿ ಹಾದು ಹೋಗುವುದಕ್ಕೆ ಕೃಷ್ಣ ನಾಯ್ಕ್ ಹಾಗೂ ಅವರ ಮನೆಯವರು ಆಕ್ಷೇಪಿಸಿರುತ್ತಾರೆ. ನಿನ್ನೆ ಮಾ. 13ರಂದು ಸಂಜೆ 6.30 ಗಂಟೆಗೆ ಕುಶ ಎಂಬವರು ತನ್ನ ಸ್ಕೂಟರನಲ್ಲಿ ನೆರೆಯ ಗಣೇಶ್ರವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಔಷಧಿ ತರಲು ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಪಡ್ಪು ಎಂಬಲ್ಲಿ ತಲುಪಿದಾಗ ನಾಲ್ವರು ಸ್ಕೂಟರ್ ಅಡ್ಡಗಟ್ಟಿದ್ದಾರೆ. ಆರೋಪಿಗಳಾದ ಸುರೇಶ್, ಸುನೀಲ್, ರೋಹಿತ್ ಹಾಗೂ ಕೃಷ್ಣ ನಾಯ್ಕ ಕುಶರವರ ಸ್ಕೂಟರನ್ನು ತಡೆದು ನಿಲ್ಲಿಸಿ ಕುಶನನ್ನು ಉದ್ದೇಶಿಸಿ “ನಮ್ಮ ಜಾಗದಲ್ಲಿ ಹೋಗಿರುವ ಕರೆಂಟು ಲೈನನ್ನು ತೆಗೆಯುವುದಿಲ್ಲಾ? ಎಂದು ಹೇಳಿ ಹಲ್ಲೆ ಮಾಡಿದ್ದಾರೆ.
ಸುನೀಲ್ ಎಂಬಾತ ಮರದ ದೊಣ್ಣೆಯಿಂದ ಕುಶನ ಬೆನ್ನಿಗೆ ಹೊಡೆದಿದ್ದು. ಉಳಿದವರೆಲ್ಲರೂ ಕೈಯಿಂದ ಹೊಡೆದು, ದೂಡಿ ಹಾಕಿರುತ್ತಾರೆ. ಆ ಸಮಯ ಹಲ್ಲೆ ಮಾಡುವುದನ್ನು ನೋಡಿದ ನಾರಾಯಣ ನಾಯ್ಕ್ ಘಟನಾ ಸ್ಥಳಕ್ಕೆ ಹೋದಾಗ ಸುರೇಶ್ನು ಅಲ್ಲಿದ್ದ ಕತ್ತಿಯನ್ನು ತೆಗೆದು ಎಡ ಕೈ ಹೆಬ್ಬೆರಳು,ಎಡಕೋಲು ಕೈ ಹಾಗೂ ಎಡ ಹಣೆಯ ಭಾಗಕ್ಕೆ ಕತ್ತಿಯಿಂದ ಕಡಿದಿದ್ದಾನೆ. ಆ ಸಮಯಕ್ಕೆ ಇಬ್ಬರೂ ಬೊಬ್ಬೆ ಹೊಡೆದಾಗ ಸಂಬಂಧೀಕರು ಬರುವುದನ್ನು ಕಂಡು ಆರೋಪಿಗಳು ನೀವು ಕರೆಂಟು ಲೈನ್ ತೆಗೆಯದೇ ಇದ್ದರೆ ನಿಮ್ಮನ್ನು ಕೊಂದು ಹಾಕುತ್ತೇವೆ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡವರನ್ನು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ನೀಡಲಾಗಿದೆ.
ಲೀಲಾ ಅವರು ನೀಡಿದ ದೂರಿನ ಸಾರಾಂಶ
ಲೀಲಾ ಅವರ ಮಕ್ಕಳಾದ ಸುನಿಲ್ ಮತ್ತು ಸುರೇಶನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸಂಜೆ ಸುಮಾರು 6.30 ಗಂಟೆಗೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಚೆಂಬರಕಲ್ಲು ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ನೆರೆಮನೆಯ ಕುಶ ನಾಯ್ಕ್ ರವರು ಸ್ಕೂಟರಿನಲ್ಲಿ ಬಂದಿದ್ದಾನೆ. ಆಗ ಅವರಲ್ಲಿ ನೀವು ನಿಮ್ಮ ಮನೆಗೆ ನಮ್ಮ ಅನುಮತಿ ಇಲ್ಲದೆ ನಮ್ಮ ಜಾಗದ ಮಾರ್ಗವಾಗಿ ವಿದ್ಯುತ್ ಲೈನ ಎಳೆದಿರುವ ವಿಚಾರವಾಗಿ ಕೇಳಿದಾಗ ಕುಶ ನಾಯ್ಕ ರವರು ಆ ವಿದ್ಯುತ್ ಲೈನ ತೆಗೆಯುವುದಿಲ್ಲ ನೀವು ಏನು ಬೇಕಾದರೂ ಮಾಡಿ ಎಂದು ಹೇಳಿ ಎಂದು ಸ್ಕೂಟರ್ನಿಂದ ತಾಗಿಸಿದ್ದಲ್ಲದೆ ಮಗ ಸುನಿಲ್ನಿಗೆ ಕುಶ ನಾಯ್ಕರವರು ಕೈಯಿಂದ ಹೊಟ್ಟೆಗೆ, ಎದೆಗೆ ಹೊಡೆದು ದೂಡಿ ಹಾಕಿದಾಗ ಸ್ಕೂಟರ್ ಮೇಲೆ ಬಿದ್ದಿರುತ್ತಾನೆ. ಅಷ್ಟರಲ್ಲಿ ಕಾರೊಂದರಲ್ಲಿ ಕುಶನ ಸಹೋದರರಾದ ಲವ, ನಾರಾಯಣ ನಾಯ್ಕ, ಕೃಷ್ಣ ನಾಯ್ಕ್ ಬಂದು ಅವರ ಪೈಕಿ ನಾರಾಯಣ ನಾಯ್ಕ ಆತನ ಕೈಯಲ್ಲಿದ್ದ ಬ್ಯಾಟಿನಿಂದ ಲೀಲಾರವರ ಬಲ ಕಾಲಿನ ತೊಡೆಗೆ ಹೊಡೆದಿದ್ದು. ಉಳಿದ ಆರೋಪಿಗಳು ಸುನಿಲ್ ಮತ್ತು ಸುರೇಶ್ನಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ.
ಆ ಸಮಯ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯಿಂದ ಪಿರ್ಯಾಧಿದಾರರ ಗಂಡ ಕೃಷ್ಣ ನಾಯ್ಕ್ , ಮೈದುನ ಸುಂದರ ನಾಯ್ಕ್ ,ಮೈದುನನ ಮಗ ರೋಹಿತ ಹಾಗೂ ನೆರೆಯ ರವಿರವರು ಬರುವುದನ್ನು ನೋಡಿದ ಆರೋಪಿಗಳು ಇನ್ನೂ ಮುಂದೆ ವಿದ್ಯುತ್ ಲೈನ ವಿಚಾರಕ್ಕೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಸ್ಕೂಟರ್ ಹಾಗೂ ಕಾರಿನಲ್ಲಿ ಹೋಗಿರುತ್ತಾರೆ. ಈ ಹಲ್ಲೆಯಿಂದ ಪಿರ್ಯಾಧಿದಾರರ ಬಲ ಕಾಲಿನ ತೊಡೆಗೆ ನೋವಾದ ಗಾಯ, ಸುರೇಶನ ಮೈ ,ಕೈಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಗಾಯದ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.