


ವಿಟ್ಲ: ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಲಪದವು ಅಂಗನವಾಡಿ ಕೇಂದ್ರದಲ್ಲಿ ವೀರಕಂಬ ಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಸ್ನೇಹ ಸಂಜೀವಿನಿ ಸ್ತ್ರೀ ಶಕ್ತಿ ಗುಂಪುಗಳ ಒಕ್ಕೂಟ ವೀರಕಂಬ ಹಾಗೂ ಅಂಗನವಾಡಿ ಕೇಂದ್ರ, ಮಂಗಳಪದವು ಇವರ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಎರೆಹುಳು ಘಟಕದ ಉದ್ಘಾಟನೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ವಹಿಸಿದ್ದರು. ರಮೇಶ್ ನೂಜಿಪಾಡಿ, ನಿವೃತ್ತ ಸೈನಿಕರು ಹಾಗೂ ವಿಷಯ ತಜ್ಞರು, ಎರೆಹುಳು ಘಟಕದ ನಿರ್ವಹಣೆ ಹಾಗೂ ಎರೆಹುಳು ಗೊಬ್ಬರದಿಂದ ಸ್ತ್ರೀಶಕ್ತಿ ಸಂಘಗಳಿಗೆ ಆಗಬಹುದಾದ ಆದಾಯ ಗಳಿಸುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್, ರಘು ಪೂಜಾರಿ, ಜನಶಿಕ್ಷಣ ಟ್ರಸ್ಟ್, ಮುಡಿಪು ಇದರ ಸಂಯೋಜಕ ಚೇತನ್, ಅಂಗನವಾಡಿ ಕಾರ್ಯಕರ್ತೆ ಶೃತಿ, ಮಲ್ಲಿಕಾ ಎಂ.ಬಿ.ಕೆ, ಜಯಂತಿ, ಎಲ್.ಸಿ.ಆರ್, ಸ್ನೇಹ ಸಂಜೀವಿನಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಬಿ.ಆರ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ವಿಟ್ಲ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರೇಣುಕಾ ವಂದಿಸಿದರು.








