ವಿಟ್ಲ: ಇಲ್ಲಿನ ಅನಂತಾಡಿ ಗ್ರಾಮದ ಕೊಂಬಿಲದ ಕಿನ್ನಿ ಗದ್ದೆ ಎಂಬಲ್ಲಿನ ಮನೆಯ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ವೀರಕಂಭ ಕೊಡಾಜೆ ರಸ್ತೆಯಲ್ಲಿ ಸಿಗುವ ಕೊಂಬಿಲ ಎಂಬಲ್ಲಿನ ಆರಕ್ಷಕ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಸೀತಾರಾಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ರಾತ್ರಿ ಒಂದು ಗಂಟೆಗೆ ಈ ಘಟನೆ ನಡೆದಿದ್ದು, ನಾಯಿ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡು ಮನೆಯ ಹಿಂಭಾಗ ನೋಡಿದಾಗ ಚಿರತೆ ನಾಯಿಯ ಮೇಲೆ ದಾಳಿ ನಡೆಸುತ್ತಿರುವ ದೃಶ್ಯ ಕಂಡ ಬೆಚ್ಚಿ ಬಿದ್ದಿದ್ದಾರೆ.
ಸುಮಾರು 20 ಮೀಟರ್ ದೂರ ನಾಯಿಯನ್ನು ಚಿರತೆ ಎಳೆದೊಯ್ಯಲು ಯತ್ನಿಸಿದ್ದು, ನಾಯಿ ಚಿರತೆಯಿಂದ ತಪ್ಪಿಸಿಕೊಂಡಿದೆ. ಈ ವೇಳೆ ಮನೆಯ ಎಲ್ಲಾ ಲೈಟ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿರತೆ ಕಾಡಿನತ್ತ ಓಡಿ ಮರೆಯಾಗಿದೆ.
ಕೆಲದಿನಗಳ ಹಿಂದಷ್ಟೇ ಚಿರತೆ ಸಮೀಪದ ರಸ್ತೆಯಲ್ಲಿ ರಾತ್ರಿ ವೇಳೆ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ನಾಯಿಯ ಮೇಲೆ ದಾಳಿ ನಡೆಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಬಂಟ್ವಾಳ ಎಎಸ್ಪಿ ಕಛೇರಿಯಲ್ಲಿ ಉದ್ಯೋಗದಲ್ಲಿರುವ ಸೀತಾರಾಮರವರು ಘಟನೆ ಕುರಿತಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಚಿರತೆ ಬಂಧನಕ್ಕೆ ಪಂಜರ ಅಳವಡಿಸುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.