ಪುತ್ತೂರು: ಅಕ್ರಮವಾಗಿ ಬಂಧಿಸಿದ ಪಿಎಫ್ಐ ನಾಯಕರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಮೇಲೆ ಉಪ್ಪಿನಂಗಡಿ ಪೋಲಿಸರು ಏಕಾಏಕಿ ಲಾಠಿ ಚಾರ್ಜ್ ನಡೆಸಿ ಗಂಭೀರ ಸ್ವರೂಪದ ಗಾಯಗೊಳಿಸಿದ ಕೃತ್ಯವನ್ನು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಲಾಯಿ ತೀವ್ರವಾಗಿ ಖಂಡಿಸಿದ್ದಾರೆ.
ಇತ್ತೀಚೆಗೆ ಇಲಂತಿಲದಲ್ಲಿ ಐದು ಮಂದಿ ಮುಸ್ಲಿಂ ಯುವಕರ ಮೇಲೆ ಸಂಘಪರಿವಾರದ ಮೂವತ್ತರಷ್ಟು ಗೂಂಡಾಗಳು ತ್ರಿಶೂಲದಿಂದ ಮಾರಣಾಂತಿಕ ಹಲ್ಲೆ ನಡೆದ ಮರುದಿನ ಹಿಂದೂ ಯುವಕರ ಮೇಲೆ ದಾಳಿ ನಡೆದಿದೆ ಎಂಬ ನೆಪದಲ್ಲಿ ಮೂವರು ಮುಸ್ಲಿಂ ನಾಯಕರನ್ನು ಅಕ್ರಮವಾಗಿ ಬಂಧಿಸುವುದನ್ನು ಖಂಡಿಸಿ, ಅವರನ್ನು ಬಿಡುಗಡೆಗೆ ಆಗ್ರಹಿಸಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಗೆ ಪೋಲೀಸರು ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದಾರೆ.
ನಿನ್ನೆ ಬೆಳಿಗ್ಗೆಯಿಂದ ಸಂಜೆ ತನಕ ಪ್ರತಿಭಟನಾಕಾರರು ಶಾಂತಿಯಿಂದಲೇ ವರ್ತಿಸುತ್ತಿದ್ದರು ಮಾತ್ರವಲ್ಲದೆ ಸಂಘಟನೆಯ ನಾಯಕರು ಪೋಲಿಸರ ಸಮ್ಮುಖದಲ್ಲಿ ಎಲ್ಲರನ್ನೂ ಶಾಂತಿಯಿಂದಲೇ ಇರುವಂತೆ ಪ್ರೇರೇಪಣೆ ಮಾಡ್ತಾ ಇದ್ದರು ಕೂಡ ಕೆಲವು ಅಧಿಕಾರಿಗಳು ಕಾರ್ಯಕರ್ತರನ್ನು ಪ್ರಚೋದಿಸಲು ಯತ್ನಿಸಿದರು ಸಹ ಶಾಂತಿ ಕಾಪಾಡಿಕೊಂಡು ಬಂದಿರುತ್ತಾರೆ.
ಆದರೆ ಪೊಲೀಸ್ ಅಧಿಕಾರಿಗಳು ಏಕಾಏಕಿ ಪ್ರತಿಭಟನಾ ನಿರತರ ಮೇಲೆ ಲಾಠಿ ದಾಳಿ ನಡೆಸಿ ಕ್ರೌರ್ಯವನ್ನು ಮೆರೆದು ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸಿದ್ದಾರೆ ಇದು ಪೊಲೀಸ್ ಇಲಾಖೆಯ ದ್ವಿಮುಖ ನೀತಿಯಾಗಿರುತ್ತದೆ.
ಆದುದರಿಂದ ಉನ್ನತ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದ್ದಾರೆ.