ಅಪರಿಚಿತ ಸ್ಕಾರ್ಪಿಯೋ ಕಾರೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಘಟನೆ ನಡೆದಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಅ 13 ರಂದು ತಡ ರಾತ್ರಿ ನಡೆದಿದೆ. ಈ ಬಗ್ಗೆ ಹರೀಶ್ ಪೂಂಜಾರವರ ಕಾರು ಚಾಲಕ ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ, ಹರೀಶ್ ಪೂಂಜಾರವರು ಬೆಳ್ತಂಗಡಿಗೆ ಕಾರಿನಲ್ಲಿ ಹಿಂತಿರುಗಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಮೊದಲು ಶಾಸಕರ ಕಾರನ್ನು ದುಷ್ಕರ್ಮಿಯು ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದಾನೆ. ಶಾಶಕರಿದ್ದ ಕಾರು ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ತಲುಪುತ್ತಲೇ, ದುಷ್ಕರ್ಮಿ ತನ್ನ ಕಾರನ್ನು ಅದಕ್ಕೆ ಅಡ್ಡ ನಿಲ್ಲಿಸಿ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲಿದ್ದ ಆಯುಧವನ್ನು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ಏನಿದೆ..?
ಅ.12ರಂದು ಶಾಸಕ ಹರೀಶ್ ಪೂಂಜಾರವರು ಬೆಂಗಳೂರಿಗೆ ಹೋಗಿದ್ದು ಅ 13 ರಂದು ಸಂಜೆ 7 ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರ ಬರುವಿಕೆಯ ಮಾಹಿತಿ ಇದ್ದ ಅವರ ಕಾರು ಚಾಲಕ ನವೀನ್ ಎಂಬವರು ಶಾಸಕರನ್ನು ಕರೆ ತರಲು ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ.
ಅಲ್ಲಿಂದ ನವೀನ್ ಅವರು ಶಾಸಕರನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್ ಗೆ ಕರೆ ತಂದು ಬಿಟ್ಟಿದ್ದು ಅಲ್ಲಿ ಅವರು ಮೀಟಿಂಗ್ ಒಂದರಲ್ಲಿ ಭಾಗವಹಿಸಿದ್ದಾರೆ. ರಾತ್ರಿ ಸುಮಾರು 10.40ರ ವೇಳೆಗೆ ಮೀಟಿಂಗ್ ಮುಗಿಸಿ ಶಾಸಕ ಪೂಂಜಾರವರು ಅಲ್ಲಿಗೆ ಆಗಮಿಸಿದ್ದ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ರವರ ಕಾರಿನಲ್ಲಿ ತೆರಳಿದ್ದಾರೆ. ಹೀಗಾಗಿ ನವೀನ್ ಅವರು ಒಬ್ಬರೇ ಶಾಸಕರ ಕಾರಿನಲ್ಲಿ ಹಿಂದಿನಿಂದ ತೆರಳಿದ್ದಾರೆ.
ಶಾಸಕರು ಕಾರಿನಲ್ಲಿ ನಂತೂರು, ಪಡೀಲ್ ಮಾರ್ಗವಾಗಿ ತೆರಳಿದ್ದು, ನಾಗುರಿ ರೈಲ್ವೇ ಓವರ್ ಬ್ರಿಡ್ಜ್ ಬಳಿ ಬರುತ್ತಲೇ ಸ್ಥಾರ್ಪಿಯೋ ಕಾರೊಂದು ಅವರ ಕಾರನ್ನು ಅನುಮಾನಸ್ಪದವಾಗಿ ಹಿಂಬಾಲಿಸಿದೆ. ಇದನ್ನು ಗಮನಿಸಿದ ನವೀನ್ ಅವರು ವಿಚಾರವನ್ನು ಪೂಂಜಾರವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಈ ವೇಳೆ ಪೂಂಜಾರವರು ಸ್ಕಾರ್ಪಿಯೋ ಕಾರನ್ನು ಹಿಂಬಾಲಿಸಿಕೊಂಡು ಬರುವಂತೆ ತಿಳಿಸಿದ್ದಾರೆ.
ರಾತ್ರಿ 11.15 ರ ಸುಮಾರಿಗೆ ಶಾಸಕರಿದ್ದ ಕಾರು ಫರಂಗಿಪೇಟೆ ಮೀನು ಮಾರ್ಕೆಟ್ ನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಸ್ಕಾರ್ಪಿಯೋ ಕಾರಿನಲ್ಲಿದ್ದ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾನೆ. ಬಳಿಕ ಆತ ಕಾರಿನಲ್ಲಿದ್ದ ಶಾಸಕ ಪೂಂಜಾ, ಅವರ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಹಾಗೂ ತನ್ನ ಕೈಯಲಿದ್ದ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.
ಹೀಗಾಗಿ ಚಾಲಕ ರಕ್ಷಣೆಗೆ ಶಾಸಕ ಪೂಂಜಾರಿದ್ದ ಕಾರನ್ನು ಫರಂಗಿಪೇಟೆ ಹೊರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹೊರ ಠಾಣೆ ಮುಂಭಾಗ ಕಾರನ್ನು ನಿಲ್ಲಿಸುತ್ತಲೇ ಸ್ಕಾರ್ಪಿಯೋ ಕಾರು ಬಿಸಿರೋಡ್ ನತ್ತ ಪರಾರಿಯಾಗಿದೆ.