ಶಿವಮೊಗ್ಗ: ನಗರದ ಹೊರವಲಯದ ರಾಗಿಗುಡ್ಡದಲ್ಲಿ ಬುಧವಾರ ರಾತ್ರಿ ನಡೆದ ಹಲ್ಲೆ ಪ್ರಕರಣ ಟ್ವಿಸ್ಟ್ ಪಡೆದಿದೆ. ಅಸಲಿಗೆ ಬಶೀರ್ ನಜೀರ್ ಅಹ್ಮದ್ ಎಂಬಾತ ಕುಡಿದ ಮತ್ತಿನಲ್ಲಿ ಸಂಭವಿಸಿದೆ ಎಂಬ ಸಂಗತಿ ಬಯಲಾಗಿದೆ.
ಲಾರಿ ಡ್ರೈವರ್ ಆಗಿರುವ ರಾಗಿಗುಡ್ಡದ ಬಶೀರ್ ನಜೀರ್ ಅಹ್ಮದ್ ಮೇಲೆ ನಾಲ್ಕು ಜನರ ತಂಡ ಹಲ್ಲೆ ನಡೆಸಿ, ಎರಡು ಆಟೋಗಳಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದ ಬಶೀರ್ನ ಸ್ನೇಹಿತ ಮಾಧ್ಯಮಕ್ಕೆ ಹೇಳಿಕೆ ನೀಡಿ, ರಾಗಿಗುಡ್ಡದ ಕೆಲವರ ವಿರುದ್ಧ ಆರೋಪ ಹೊರಿಸಿದ್ದ. ಪ್ರಕರಣದ ತನಿಖೆ ನಡೆಸಿದ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ರಾಗಿಗುಡ್ಡ ಬಳಿಯ ದೀಪಕ ವೈನ್ಸ್ ಎದುರು ನಿಂತಿದ್ದ ಬಶೀರ್ ಮತ್ತು ನಾಲ್ವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ನೂಕಾಟದಲ್ಲಿ ಕುಡಿದ ಮತ್ತಿನಲ್ಲಿದ್ದ ಬಶೀರ್ ಬಿದ್ದು, ತಲೆಗೆ ಗಾಯವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತ ಸಿಸಿಟಿವಿ ಫೂಟೇಜ್ ಪೊಲೀಸರಿಗೆ ಲಭ್ಯವಾಗಿದೆ. ರಾತ್ರಿ ನಡೆದ ಗಲಾಟೆಯಿಂದ ರಾಗಿಗುಡ್ಡ ಪ್ರದೇಶದಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿತ್ತು.
ಅನ್ಯಕೋಮಿನ ಯುವಕನೊಬ್ಬ ಮದ್ಯ ಸೇವಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದ್ದು, ಆತನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿ ರಾಗಿಗುಡ್ಡ, ಶಾಂತನಗರ ಭಾಗದಲ್ಲಿ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ರಾತೋರಾತ್ರಿ ಶಾಂತಿ ನಗರ, ರಾಗಿಗುಡ್ಡ ಪ್ರದೇಶದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲೂ ಬಶೀರ್ ಸ್ನೇಹಿತರು, ಸಂಬಂಧಿಕರು ದೌಡಾಯಿಸಿದ್ದರು. ಈಗ ನಿಜ ಸಂಗತಿ ಬಯಲಾಗಿದೆ.