ಶಿವಮೊಗ್ಗ: ಕಾಲೇಜು ವಿದ್ಯಾರ್ಥಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಪಶು ವಿಶ್ವವಿದ್ಯಾಲಯ ಬಳಿಯಿರುವ ರೈಲ್ವೆ ಬ್ರಿಡ್ಜ್ ಹತ್ತಿರ ನಡೆದಿದೆ. ಹೊಸಮನೆಯ 6ನೇ ಕ್ರಾಸ್ ನಿವಾಸಿ ವಿಶ್ವಾಸ್ (17) ಮೃತ ವಿದ್ಯಾರ್ಥಿ.
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ತಂದೆ-ತಾಯಿ ಜತೆ ವಾಸಿಸುತ್ತಿರುವ ನವೀನ್ ಪ್ರಥಮ ಪಿಯು ವಿದ್ಯಾರ್ಥಿ. ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿರುವ ಆತನಿಗೆ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಇದರಿಂದ ಆತ ತೀವ್ರವಾಗಿ ನೊಂದಿದ್ದ. ಮನೆಯಲ್ಲಿ ಖಿನ್ನನಾಗಿ ಕುಳಿತಿರುತ್ತಿದ್ದ ಆತನಿಗೆ ಮನೆಯಲ್ಲಿ ಪೋಷಕರು ಸಮಾಧಾನ ಹೇಳಿದ್ದರು. ಮುಂದಿನ ದಿನಗಳಲ್ಲಿ ಚೆನ್ನಾಗಿ ಓದಿದರೆ ಆಯಿತು ಎಂದಿದ್ದರು, ಪರೀಕ್ಷೆಯ ಅಂಕವೇ ದೊಡ್ಡ ಸಂಗತಿಯಲ್ಲ ಅಂತಾನೂ ತಿಳಿ ಹೇಳಿದ್ದರು.
ಆದರೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಆತನಿಗೆ ಕಡಿಮೆ ಅಂಕ ಬಂದಿದ್ದು ಭಾರಿ ನೋವನ್ನು ತಂದಿತ್ತು. ಅದನ್ನು ಭರಿಸಲಾಗದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈತ ಬುಧವಾರದಿಂದ ಮನೆಯಲ್ಲಿರಲಿಲ್ಲ. ಮಗ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈಗ ಅವನು ಶವವಾಗಿ ಪತ್ತೆಯಾಗಿದ್ದಾನೆ.