ಬೆಳ್ತಂಗಡಿ: ಕಳೆದ ಜೂನ್ 8 ರಂದು ಬೆಳ್ತಂಗಡಿಯ ಶಿಶಿಲದಲ್ಲಿ ಕೈ ಕಾರ್ಯಕರ್ತನಿಂದ ತನ್ನದೆ ಮತ್ತೊಬ್ಬ ಕಾರ್ಯಕರ್ತ ಹಾಗೂ ರೌಡಿ ಶೀಟರ್ ನಡುವೆ ದನದ ವಿಚಾರವಾಗಿ ಕುಡಿದ ಮತ್ತಿನಲ್ಲಿ ನಡೆದ ಗಲಾಟೆ ವೇಳೆ ರೌಡಿ ಶೀಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದು ಇದರ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂದು ಸಂಜೆ ಹಳೆ ಗಲಾಟೆಗೆ ಸಂಬಂಧಿಸಿದಂತೆ ಈ ಹಿಂದೆ ಹಲ್ಲೆ ಮಾಡಿದಾತನ ವಿರುದ್ಧ ರಿವೆಂಜ್ ತೀರಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಹಾಗೂ ರೌಡಿಶೀಟರ್ ಕಿರಣ್ ಶಿಶಿಲ ಇಂದು ಸಂಜೆ ಶಿಶಿಲದ ಕಾರೆಗುಡ್ಡೆ ಬಳಿ ತನ್ನ ಬೊಲೆರೋ ವಾಹನದೊಂದಿಗೆ ಕಾದು ಕುಳಿತಿದ್ದ. ಇದೇ ರಸ್ತೆಯಲ್ಲಿ ಓಮಿನಿ ಕಾರಿನಲ್ಲಿ ಕಾರೆಗುಡ್ಡೆ ಕಡೆ ಶಿಶಿಲ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಬರುತ್ತಿದ್ದಾಗ ರಸ್ತೆಗೆ ಬೊಲೆರೋ ವಾಹನ ಅಡ್ಡಲಾಗಿ ಇಟ್ಟು ತಲವಾರ್ ಸಮೇತ ಬಂದು ಪುರುಷೋತ್ತಮ ಅವರನ್ನು ಕಾರಿನಿಂದ ಎಳೆದು ಹಾಕಿ ಮೊನ್ನೆ ನೀನು ನನಗೆ ಹೊಡೆದ್ದೀಯಾ, ಅದಕ್ಕೆ ಇವತ್ತು ನಾನು ರಿವೇಂಜ್ ತೀರಿಸಿಕೊಳ್ಳುತ್ತೇನೆ ಅಂತಾ ಹೇಳಿ ಕುತ್ತಿಗೆ ಹಾಗೂ ತಲೆಗೆ ಗಂಭೀರವಾಗಿ ಮಾರಾಕಾಸ್ತ್ರದಿಂದ ಹೊಡೆದಿದ್ದಾನೆ. ಅಲ್ಲಿಂದ ಶಿಶಿಲ ಪೇಟೆಗೆ ಬಂದು ಮೊನ್ನೆ ಪುರುಷೋತ್ತಮನಿಂದ ಕಿರಣ್ ಶಿಶಿಲ ಮೇಲೆ ಥಳಿತ ಅಂತ ಸುದ್ದಿಯಾಗಿತ್ತು. ಇಂದು ಪುರುಷೋತ್ತಮನ ಮೇಲೆ ರಿವೇಂಜ್ ತೀರಿಸಿಕೊಂಡ ಕಿರಣ್ ಅಂತಾ ಸುದ್ದಿ ಮಾಡಿಸಿ ಎಂದು ಬೊಬ್ಬೆ ಹಾಕಿ ಸ್ಥಳದಿಂದ ಬೊಲೆರೋ ವಾಹನದಲ್ಲಿ ಪರಾರಿಯಾಗಿದ್ದಾನೆ.
ಮಾರಾಕಾಸ್ತ್ರ ದಾಳಿಯಿಂದ ಗಂಭೀರ ಗಾಯಗೊಂಡ ಪುರುಷೋತ್ತಮ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಳಕ್ಕೆ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ರೌಡಿಶೀಟರ್ ಕಿರಣ್ ಶಿಶಿಲ ಪತ್ತೆಗೆ ಬಲೆ ಬಿಸಿದ್ದಾರೆ.
ಶಿಶಿಲ ಗ್ರಾಮ ಪಂಚಾಯತಿನಿಂದ ಗೃಹಸಚಿವರಿಗೆ ದೂರು:
ಶಿಶಿಲ ಗ್ರಾಮ ಪಂಚಾಯತಿನ ಸಾಮಾನ್ಯ ಸಭೆಯಲ್ಲಿ ಎಲ್ಲರು ಸೇರಿ ಕಿರಣ್ ಶಿಶಿಲ ಮತ್ತು ಪುರುಷೋತ್ತಮ ಕಾನೂನು ಧಕ್ಕೆ ಮಾಡುತ್ತಿರುವ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ಇವರು ಗ್ರಾಮದಲ್ಲಿ ಹೆಚ್ಚಿನ ಅನಾಹುತ ಮಾಡುವ ಸಾಧ್ಯತೆ ಇದೆ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶಿಶಿಲ ಅಧ್ಯಕ್ಷ ಸಂದೀಪ್ ಅವರ ಲೇಟರ್ ಹೆಡ್ ನಲ್ಲಿ ಬರೆದು ಮನವಿ ಮಾಡಿದ್ದರು.
ಅಷ್ಟಕ್ಕೂ ಅಂದು ಗಲಾಟೆಗೆ ಕಾರಣ ಏನು? : ಕಳೆದ ಕೆಲ ದಿನಗಳ ಹಿಂದೆ ರೌಡಿಶೀಟರ್ ಕಿರಣ್ ಶಿಶಿಲ ಹಾಸನ ಜಿಲ್ಲೆಗೆ ಸಾಕಲು ಶಿಶಿಲದಿಂದ ನಾಲ್ಕು ದನಗಳನ್ನು ಕಾನೂನು ರೀತಿಯಲ್ಲಿ ಪರವಾನಿಗೆ ಪಡೆದುಕೊಂಡು ವಾಹನದಲ್ಲಿ ಸಾಗಿಸುವ ವೇಳೆ ಪುರುಷೋತ್ತಮ ಅಡ್ಡಗಟ್ಟಿದ್ದರು. ಈ ವೇಳೆ ಕಿರಣ್ ಶಿಶಿಲ ಅವರಿಗೆ ಬೈದು ವಾಹನ ಕಳುಹಿಸಿಕೊಟ್ಟಿದ್ದಾನೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪುರೋಷತ್ತಮ್ ಅಕ್ರಮ ದನ ಸಾಗಾಟ ಮಾಡಿ ಹಣ ಮಾಡುತ್ತಿರುವ ಕಿರಣ್ ಶಿಶಿಲ ಎಂದು ಸಂದೇಶ ವೈರಲ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಕಿರಣ್ ಶಿಶಿಲ ಮಂಗಳವಾರ ರಾತ್ರಿ ಕುಡಿದು ತನ್ನ ಮೂವರು ಸ್ನೇಹಿತರ ಜೊತೆ ಬೊಲೆರೋ ವಾಹನದಲ್ಲಿ ಶಿಶಿಲ ನಾಗನಡ್ಕ ಪೇಟೆಗೆ ಒಂದು ಪುರುಷೋತ್ತಮ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದರು. ಈ ವೇಳೆ ಇಬ್ಬರು ಕೈ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದು, ನಂತರ ನೆಲಕ್ಕೆ ಉರುಳಿಸಿ ಹೊಡೆದಾಡಿಕೊಂಡಿದ್ದರು. ನೂರಕ್ಕೂ ಹೆಚ್ಚು ಸ್ಥಳೀಯರು ಘಟನೆಗೆ ಸಾಕ್ಷಿಯಾಗಿದ್ದರು. ಈ ವೇಳೆ ಇವರಿಬ್ಬರ ಹೊಡೆದಾಟವನ್ನು ಕೆಲವರು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದರು. ಕಿರಣ್ ಶಿಶಿಲ ಮೇಲೆ ಒಟ್ಟು ಒಂಭತ್ತು ಪ್ರಕರಣ ನ್ಯಾಯಾಲಯದಲ್ಲಿ ತನಿಖೆ ಹಂತದಲ್ಲಿದೆ.