ಹವಾಮಾನ ವೈಪರಿತ್ಯ ಹಾಗೂ ಎಲೆಚುಕ್ಕಿ ರೋಗದಿಂದ ಮೊದಲೇ ಸಂಕಷ್ಟದಲ್ಲಿರುವ ಅಡಿಕೆ ರೈತರ ಮೇಲೆ ಕೇಂದ್ರ ಸರಕಾರ ಹೊಸ ಭೂತವನ್ನು ಛೂ ಬಿಡುತ್ತಿದೆ. ಈ ಮೂಲಕ ಅಡಿಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು, ” ಕೃಷಿಯನ್ನು ಕೇಂದ್ರ ಬಿಜೆಪಿ ಸರಕಾರ ಇನ್ನಿಲ್ಲದಷ್ಟು ಕಡೆಗಣಿಸುತ್ತಿದೆ ಎನ್ನುವುದಕ್ಕೆ ಈಗ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳೇ ಸಾಕ್ಷಿ. ಹವಾಮಾನ ವೈಪರಿತ್ಯ ಹಾಗೂ ಎಲೆಚುಕ್ಕಿ ರೋಗದಿಂದ ಅಡಿಕೆ ಕೃಷಿಕರ ಬವಣೆ ಹೇಳತೀರದಾಗಿದೆ “ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ಕರಾವಳಿ, ಮಲೆನಾಡು, ಹಾಸನ, ಕೊಡಗು ಸೇರಿ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಜಗತ್ತಿನಲ್ಲಿ ಅತಿಹೆಚ್ಚು ಅಡಿಕೆ ಬೆಳೆಯುವ ಭಾರತದಲ್ಲಿ ಹೆಚ್ಚು ಫಸಲು ಬರುವುದೇ ನಮ್ಮ ರಾಜ್ಯದಲ್ಲಿ. ಆದರೆ, ಈ ಬೆಳೆ ತೆಗೆಯುವ ರಾಜ್ಯದ ರೈತರ ಬದುಕು ಕತ್ತಲೆಯಲ್ಲಿದೆ”.
“ಅಡಿಕೆ ಬೆಳೆಯುವುದು ಎಂದರೆ ಕತ್ತಿಯ ಮೇಲಿನ ಸವಾರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅತಿವೃಷ್ಟಿ, ಅನಾವೃಷ್ಟಿ ಜತೆಗೆ, ನಿರಂತರ ರೋಗರುಜಿನಗಳು ಬಾಧಿಸುತ್ತ ರೈತರನ್ನು ಕಿತ್ತು ತಿನ್ನುತ್ತಿವೆ. ರಾಜ್ಯ ಸರಕಾರವು ಪರಿಣಾಮಕಾರಿ ಔಷಧಿ ಪತ್ತೆ ಹಚ್ಚಿ ಬೆಳೆಗಾರರಿಗೆ ಕಡಿಮೆ ದರದಲ್ಲಿ ಒದಗಿಸಬೇಕಿದೆ. ಬೆಳೆ ನಷ್ಟಕ್ಕೆ ಪರಿಹಾರವನ್ನು ಕೂಡ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ಮೊದಲೇ ಸಂಕಷ್ಟದಲ್ಲಿರುವ ಅಡಿಕೆ ರೈತರ ಮೇಲೆ ಕೇಂದ್ರ ಸರಕಾರ ಹೊಸ ಭೂತವನ್ನು ಛೂ ಬಿಡುತ್ತಿದೆ. ನೆರೆ ದೇಶ ಭೂತಾನ್ ನಿಂದ 17,000 ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕ್ರಮ ನಮ್ಮ ಅಡಿಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಹುನ್ನಾರವಷ್ಟೆ ಎಂದು ಆರೋಪಿಸಿದ್ದಾರೆ. ಅಡಿಕೆ ಬೆಳೆಯುತ್ತಾ ಅಡಕತ್ತರಿಯಲ್ಲಿ ಸಿಲುಕಿರುವ ರೈತರ ಹಿತ ಕಾಯುವುದು ರಾಜ್ಯ ಬಿಜೆಪಿ ಸರಕಾರದ ಕರ್ತವ್ಯ. ಅವರ ಸಂಕಷ್ಟಕ್ಕೆ ಮಿಡಿಯುವುದು ಮಾತ್ರವಲ್ಲ, ಎಲ್ಲಾ ರೀತಿಯಲ್ಲೂ ನೆರವಿಗೆ ಧಾವಿಸಬೇಕು ಎನ್ನುವುದು ನನ್ನ ಒತ್ತಾಯ ಎಂದು ಹೇಳಿದ್ದಾರೆ.