ಸಮರ್ಪಕ ಹಾಜರಾತಿ ಮತ್ತು ವೇತನಕ್ಕೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಗ್ರಾಸಿಮ್ ಇಂಡಸ್ಟ್ರೀಸ್ ಕಂಪನಿಯ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು ಶನಿವಾರ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಬೆಂಬಲ ನೀಡಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್ ಮಾತನಾಡಿ, ಕಳೆದ ಎರಡು ವರ್ಷದಿಂದ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ತಮ್ಮ ಸಮಸ್ಯೆಗಳನ್ನು ಕಂಪನಿಯವರಿಗೆ ತಿಳಿಸುತ್ತಲೇ ಬಂದಿದ್ದಾರೆ. ಆದರೆ ಕಂಪನಿ ಕಾರ್ಮಿಕರನ್ನು ಕಡೆಗಣಿಸುತ್ತಿದೆ. ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮೌಖಿಕವಾಗಿ ಭರವಸೆ ನೀಡುವ ಕಂಪನಿ ಅದನ್ನು ಕಾರ್ಯರೂಪಕ್ಕೆ ಬರುತ್ತಿಲ್ಲ. ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮೌಖಿಕ ಆಶ್ವಾಸನೆಗಳನ್ನು ನೀಡುವುದರ ಬದಲಾಗಿ ಕಂಪನಿ, ಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಲಿಖಿತವಾಗಿ ಭರವಸೆ ನೀಡಬೇಕು. ಒಂದು ವೇಳೆ ಸೋಮವಾರದ ಒಳಗೆ ಕಾರ್ಮಿಕರ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಸೋಮವಾರ ಮುಂಜಾನೆ 9:00 ಗಂಟೆಗೆ ಕಂಪನಿಯ ಮುಖ್ಯದ್ವಾರದ ಎದುರು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಕಂಪನಿಯ ಪ್ರಮುಖ ಅಧಿಕಾರಿಗಳು ಭೇಟಿ ನೀಡಿ ಕಾರ್ಮಿಕರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರೆಯುತ್ತದೆ. ಕಂಪನಿಯ ಪ್ರಮುಖ ನಾಮಫಲಕವನ್ನು ಇಂಗ್ಲಿಷ್ನಲ್ಲಿ ಅಳವಡಿಸಲಾಗಿದ್ದು, ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡದ ನಾಮಫಲಕ ಬಳಕೆ ಮಾಡಲೇಬೇಕು. ಈ ಹಿಂದೆ ಈ ಕಾರ್ಖಾನೆ ಬಿಣಗಾ ಕಾರ್ಖಾನೆಯೆಂದೆ ಪ್ರಸಿದ್ಧಿಯಾಗಿದ್ದು ಅದರ ಹೆಸರನ್ನು ನಾಮಫಲಕದಿಂದ ಕೈಬಿಡಲಾಗಿದ್ದು, ಮೂರ್ಖತನ ಎಂದರು.
ಗುತ್ತಿಗೆ ಕಾರ್ಮಿಕರ ಸಮಸ್ಯೆಯ ಕುರಿತು ಈಗಾಗಲೇ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಅಧ್ಯಕ್ಷ ಆರ್ ಚಂದ್ರಪ್ಪನವರ ಗಮನಕ್ಕೆ ತರಲಾಗಿದೆ. ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು, ಶೀಘ್ರವಾಗಿ ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ವಿಧಾನಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ದಿಲೀಪ್ ಅರ್ಗೇಕರ್ ಹೇಳಿದರು.
ವೇದಿಕೆಯ ಜಿಲ್ಲಾ ಮಹಿಳಾ ಕಾರ್ಯಧ್ಯಕ್ಷೆ ರುಕ್ಮಿಣಿ ಗೌಡ ಮಾತನಾಡಿ, ಇಲ್ಲಿನ ಕಾರ್ಮಿಕರಿಗೆ ತಿಂಗಳಲ್ಲಿ ಕೇವಲ ಒಂದುವಾರದ ಹಾಜರಾತಿ ನೀಡಿ ವೇತನ ನೀಡಲಾಗುತ್ತಿದೆ. ಅವರ ಬೇಡಿಕೆಯಂತೆ ಕನಿಷ್ಠ 25 ದಿನಗಳ ಹಾಜರಾತಿ ನೀಡಿ ವೇತನ ನೀಡಲೇಬೇಕು. ಸರಿಯಾದ ವೇತನವಿಲ್ಲದೆ ಕಾರ್ಮಿಕರ ಪತ್ನಿಯರು ಮತ್ತು ಮಕ್ಕಳು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಮಹಿಳಾ ಘಟಕ ಅವರ ಬೆಂಬಲಕ್ಕೆ ನಿಂತು ಪ್ರತಿಭಟನೆಯಲ್ಲಿ ಜೊತೆಯಾಗಿ ಇರುತ್ತದೆ ಎಂದರು.
ಜಿಲ್ಲಾ ಸಂಚಾಲಕ ಗೋಪಾಲ ಗೌಡ, ಕಾರವಾರ ತಾಲೂಕು ಅಧ್ಯಕ್ಷ ಮೋಹನ ಉಳ್ವೇಕರ, ರಮಾಕಾಂತ ನಾಯ್ಕ, ವಿನೋದ ಹರಿಕಂತ್ರ ಸಂತೋಷ ಮೈಲಾರ್ ಪ್ರವೀಣ ತಾಂಡೇಲ ನವೀನ್ ಅರ್ಗೇಕರ್ ದಿಲೀಪ್ ಮಡಿವಾಳ, ಯೋಗೇಶ ಸಜ್ಜಿವಾಡ್ಕರ್ ಸತೀಶ್ ಬಾಡ್ಕರ್ ಸೇರಿದಂತೆ ಹಲವಾರು ಕಾರ್ಯಕರ್ತರು ಮತ್ತು ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.