ನವದೆಹಲಿ: ಕೇರಳಕ್ಕೆ ತೆರಳಲು ಅವಕಾಶ ನೀಡುವಂತೆ ಅರ್ಜಿ ಸಲ್ಲಸಿದ್ದ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಾಸರ್ ಮದನಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ನೇತೃತ್ವದ ದ್ವಿ ಸದಸ್ಯ ಪೀಠ ಕೇರಳ ತೆರಳಲು ಅನುಮತಿ ನೀಡಲು ನಿರಾಕರಿಸಿತು.
ಅಬ್ದುಲ್ ನಾಸರ್ ಮದನಿ ಆರೋಗ್ಯ ಹದಗೆಟ್ಟಿದ್ದು ಚಿಕಿತ್ಸೆಗೋಸ್ಕರ ಕೇರಳಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು. ಕೇರಳದಲ್ಲಿ ಆರ್ಯುವೇದಿಕ್ ಚಿಕಿತ್ಸೆ ಕೊಡಿಸಬೇಕಿದೆ, ಈ ಚಿಕಿತ್ಸೆ ಬೆಂಗಳೂರಿನಲ್ಲಿ ಲಭ್ಯವಿಲ್ಲ ಅಲ್ಲದೇ ಕಳೆದ ಏಳು ವರ್ಷಗಳಿಂದ ಬಾಡಿಗೆ ಪಾವತಿಸಿ ಬೆಂಗಳೂರಿನಲ್ಲಿದ್ದು ಅವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಹಿಂದೆ ಸುಪ್ರೀಂಕೋರ್ಟ್ ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಸೂಚನೆ ನೀಡಿತ್ತು ಆದರೆ ಏಳು ವರ್ಷವಾದರೂ ಪ್ರಕರಣ ವಿಚಾರಣೆ ಅಂತ್ಯವಾಗಿಲ್ಲ. ಈಗಾಗಲೇ ಸಾಕ್ಷ್ಯಧಾರಗಳ ಹೇಳಿಕೆಯನ್ನು ಪಡೆಯಲಾಗಿದ್ದು ಕೇರಳಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ವಾದಿಸಿದರು.
ಪ್ರಶಾತ್ ಭೂಷಣ್ ವಾದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ಮದನಿ ಕೇರಳದ ಕೊಯಮತ್ತೂರು ಬ್ಲಾಸ್ಟ್ನ ಪ್ರಮುಖ ಆರೋಪಿಯಾಗಿದ್ದು ಆತನ ವಿರುದ್ಧ ಕೇರಳದಲ್ಲಿ 24 ಕೇಸುಗಳಿವೆ ಹೀಗಾಗಿ ಬೆಂಗಳೂರು ಬಿಟ್ಟು ಹೋಗಲು ಅನುಮತಿ ನೀಡಬಾರದು ಎಂದು ಕರ್ನಾಟಕ ಸರ್ಕಾರ ಪರ ವಕೀಲರು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಪೀಠ ನ್ಯಾ ಅಬ್ದುಲ್ ನಜೀರ್ ಮತ್ತು ನ್ಯಾ ಕೃಷ್ಣ ಮುರಾರಿ ಒಳಗೊಂಡ ದ್ವಿಸದಸ್ಯ ಪೀಠ ಕೇರಳಕ್ಕೆ ತೆರಳಲು ಅನುಮತಿ ನೀಡಲು ನಿರಾಕರಿಸಿತು. ಅಬ್ದುಲ್ ನಾಸರ್ ಮದನಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಆರೋಪಿಯಾಗಿದ್ದು 2014ರಲ್ಲಿ ಬೆಂಗಳೂರು ಬಿಟ್ಟು ತೆರಳದಂತೆ ಷರತ್ತುವಿಧಿಸಿ ಜಾಮೀನು ನೀಡಿತ್ತು.