ಧಾರವಾಡ: ಕೆಲಗೇರಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಸಾವಿಗೆ ಸಲಿಂಗ ಕಾಮವೇ ಕಾರಣ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ದಾನೂನಗರದ ಮಹಮ್ಮದ್ ಯಾಸಿನ್ (24) ಆತ್ಮಹತ್ಯೆಗೆ ಶರಣಾದ ಯುವಕ.
ಕಳೆದ ವಾರ ಈತ ಮನೆಯಿಂದ ನಾಪತ್ತೆಯಾದ ಕಾರಣ ಆತಂಕಗೊಂಡ ಮನೆಯವರು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಕೆಲಗೇರಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಆಟೋ ಓಡಿಸುತ್ತಿದ್ದ ಯಾಸಿನ್ ಆತ್ಮಹತ್ಯೆಗೆ ಕಾರಣ ಹುಡುಕಿದಾಗ ಈ ವಿಚಾರ ಬಯಲಾಗಿದೆ. ಆತ್ಮಹತ್ಯೆಗೂ ಮುನ್ನ ಗೆಳೆಯರಿಗೆ ಅನೇಕ ವಿಚಾರಗಳ ಬಗ್ಗೆ ಸಂದೇಶ ರವಾನಿಸಿದ್ದಾನೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದೇ ಸಲಿಂಗ ಕಾಮಿ ಪವನ್ ಹೆಸರು.
ಬಡ್ಡಿ ವ್ಯವಹಾರ ಮಾಡುತ್ತಿದ್ದ ಪವನ್ ಹಾಗೂ ಯಾಸೀನ್ ಸಾಕಷ್ಟು ಸಮಯ ಇಬ್ಬರೂ ಜತೆಯಾಗಿ ಕಾಲ ಕಳೆಯುತ್ತಿದ್ದರು. ಕೆಲ ದಿನಗಳ ಬಳಿಕ ಇವರಿಬ್ಬರ ನಡುವೆ ಬೇರೆ ತರಹದ ಗೆಳೆತನ ಶುರುವಾಗಿದೆ. ಅವಿವಾಹಿತರನ್ನೇ ಟಾರ್ಗೆಟ್ ಮಾಡುತ್ತಿದ್ದ ಪವನ್ , ಹಣ ನೀಡಿ ಸಲುಗೆ ಬೆಳೆಸಿಕೊಳ್ಳುತ್ತಿದ್ದ. ಬಳಿಕ ಅವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಮೊಬೈಲ್ನಲ್ಲಿ ಸೆರೆ ಹಿಡಿದು ಖುಷಿ ಪಡುತ್ತಿದ್ದ.
ಯಾಸಿನ್ ಕೇಳಿದಾಗಲೆಲ್ಲ ಹಣ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ವಿಚಾರಣೆಯ ವೇಳೆ ಪವನ್ ತಾನು ಯಾಸಿನ್ನ್ನು ಮದುವೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಮುಂದೆ ವಿಚಾರಿಸಿದಾಗ ತಾವಿಬ್ಬರೂ ಸಲಿಂಗ ಕಾಮಿಗಳು ಎಂದು ಹೇಳಿದ್ದಾನೆ.ಇತ್ತೀಚಿನ ದಿನಗಳಲ್ಲಿ ಬೇರೆ ಮನೆ ಮಾಡಿಕೊಂಡು ನಾವಿಬ್ಬರೂ ಇರೋಣ ಎಂದು ಯಾಸೀನ್ಗೆ ಬಲವಂತ ಮಾಡಿದ್ದ.ಯಾಸಿನ್ಗೆ ಪವನ್ನ ಈ ವರ್ತನೆಗಳು ಅಷ್ಟಾಗಿ ಇಷ್ಟವಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಅಂದು ಯಾಸಿನ್ ತನ್ನ ತಂದೆಗೆ ಕರೆ ಮಾಡಿ ಪವನ್ನಿಂದ ಕಿರುಕುಳವಾಗುತ್ತಿದೆ ಎಂದು ಹೇಳಿಕೊಂಡಿದ್ದ. ಆದರೆ, ಆವತ್ತು ಮನೆಗೆ ಹೋಗದೆ ನಾಪತ್ತೆ ಆಗಿದ್ದ. ತಂದೆಯ ಜತೆ ಮಾತನಾಡಿದ ನಂತರ ಯಾಸಿನ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ತೀವ್ರ ಸಲಿಂಗ ಕಾಮಿಯಾಗಿದ್ದ ಪವನ್ ಯಾಸಿನ್ನ್ನು ಬ್ಲ್ಯಾಕ್ ಮೇಲ್ ಮಾಡಿರಬೇಕು, ಹೀಗಾಗಿ ಆತ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪವನ್ ಕಿರುಕುಳದಿಂದಲೇ ಯಾಸಿನ್ ಸಾವನ್ನಪ್ಪಿದ್ದಾನೆ ಎಂದು ತಂದೆ ರಫೀಕ್ ಉಪನಗರ ಠಾಣೆಗೆ ದೂರು ನೀಡಿದ್ದರು. ರಫೀಕ್ ದೂರಿನ ಹಿನ್ನೆಲೆ ಸಲಿಂಗಕಾಮಿ ಪವನ್ ಗೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.