ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹವಾಲಾ ದಂಧೆ ಬೆಳಕಿಗೆ ಬಂದಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಸಾವಿರಾರು ಕೋಟಿ ಹವಾಲಾ ದಂಧೆ ನಡೆಸಿರುವುದು ಪತ್ತೆಯಾಗಿದೆ.
ಬಂಧಿತ ಆರೋಪಿಗಳು ಫೈಜಲ್, ಫಜಲ್, ಅಬ್ದುಲ್ ಮನಾಫ್, ಮಹಮ್ಮದ್ ಎನ್ನಲಾಗಿದೆ. ಕಿಂಗ್ ಪಿನ್ ಸೇರಿದಂತೆ ಬಂಧಿತರ ಜೊತೆಗೆ 150 ಜನ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲದೇ ದೇಶದಲ್ಲಿರುವ ಬೇರೆ ಬೇರೆ ರಾಜ್ಯದಲ್ಲೂ ಈ ದಂಧೆ ನಡೆಸುವ ಗ್ಯಾಂಗ್ ತಲೆ ಎತ್ತಿದೆ. ಹವಾಲಾ ದಂಧೆಯಿಂದ ವಿದೇಶಿ ವಿನಿಮಯಕ್ಕೆ ಭಾರೀ ಪೆಟ್ಟು ನೀಡುತ್ತೆ. ಮಾತ್ರವಲ್ಲದೇ ರಾಜ್ಯ ಸರ್ಕಾರಕ್ಕೂ ಸಾವಿರಾರು ಕೋಟಿ ನಷ್ಟವಾಗುತ್ತದೆ.
ಬಂಧಿತ ನಾಲ್ವರು ಆರೋಪಿಗಳು 3,000 ಕೋಟಿ ರೂ. ಹವಾಲಾ ವ್ಯವಹಾರ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳಿಂದ ಇದುವರೆಗೂ 2,886 ಅಕೌಂಟ್ಗಳಿಗೆ 3000 ಕೋಟಿ ರೂ. ವರ್ಗಾವಣೆಯಾಗಿದೆ. ಉಳಿತಾಯ ಖಾತೆ, ಚಾಲ್ತಿ ಖಾತೆ ಅಲ್ಲದೇ ಜನ್ ಧನ್ ಖಾತೆಯಲ್ಲೂ ಹಣ ವರ್ಗಾವಣೆಯಾಗಿದೆ. ಆರೋಪಿಗಳು 25 ಬ್ಯಾಂಕ್ಗಳ ಮೂಲಕ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ಬೆಂಗಳೂರಲ್ಲಿ 17 ಜನರಿಂದ ಹಣ ಪಡೆದು ದೇಶದ ಬೇರೆ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಾರೆ. ಆದರೆ ಆ ಹಣ ಎಲ್ಲಿ ಹೋಗುತ್ತಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ.ಇದುವರೆಗೆ ಆರೋಪಿಗಳು ಆರೇಳು ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿರುವ ಬಗ್ಗೆ ಅನುಮಾನ ಮೂಡಿದೆ.
ಈ ಹವಾಲಾ ದಂಧೆಯ ಕಿಂಗ್ ಪಿನ್ ಗಳಾದ ರಿಯಾಜ್ ಹಾಗೂ ಮನಸ್ ಸಹೋದರರು, ಬೆಂಗಳೂರಿನಲ್ಲಿ ನಾಲ್ವರು ಬಂಧನಕ್ಕೊಳಗಾಗುತ್ತಿದ್ದಂತೆ ಸೌದಿಗೆ ಪರಾರಿಯಾಗಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.