ನವದೆಹಲಿ: ಹಣದ ಅಕ್ರಮ ವರ್ಗಾವಣೆ ಕೇಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಸಮನ್ಸ್ ಜಾರಿಗೆ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬರುವ ಸೋಮವಾರ (ಸೆ.19) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ನಲ್ಲಿ ಸೂಚಿಸಲಾಗಿದೆ.
ಶಿವಕುಮಾರ್ ಅವರು 800 ಕಡೆ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಲ್ಲಿ 200 ಕೋಟಿ ಠೇವಣಿ ಇದೆ. 20ಕ್ಕೂ ಹೆಚ್ಚು ಬ್ಯಾಂಕ್ಗಳಲ್ಲಿ 317ಕ್ಕೂ ಹೆಚ್ಚು ಅಕೌಂಟ್ನಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಮಗಳ ಹೆಸರಲ್ಲಿ 108 ಕೋಟಿ ಅಕ್ರಮ ವ್ಯವಹಾರ ಮಾಡಿದ್ದಾರೆ. ಪುತ್ರಿ ಹೆಸರಲ್ಲಿ 48 ಕೋಟಿ ಸಾಲ ಇದೆ. ಆದರೆ ಸಾಲದ ಮೂಲ ಮತ್ತು ಹಣದ ಮೂಲವನ್ನು ತಿಳಿಸಿಲ್ಲ. 2018ರಲ್ಲಿ ದೆಹಲಿಯ ಸಪ್ತರ್ ಜಂಗ್ ಫ್ಲ್ಯಾಟ್ನಲ್ಲಿ ಸಿಕ್ಕಂತಹ 8.5 ಕೋಟಿ ಹಣಕ್ಕೂ ಲೆಕ್ಕ ಕೊಟ್ಟಿಲ್ಲ. ಎಂಬಿತ್ಯಾದಿ ಆರೋಪಗಳು ಶಿವಕುಮಾರ್ ಅವರ ಮೇಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಶಿವಕುಮಾರ್, ‘ವಿಧಾನಸಭಾ ಅಧಿವೇಶನ ಹಾಗೂ ಭಾರತ್ ಜೋಡೋ ಯಾತ್ರಾ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್ ನೀಡಿದೆ. ನಾನು ಸಹಕರಿಸಲು ಸಿದ್ಧ. ಆದರೆ ಈ ಸಮನ್ಸ್ ನೀಡಿರುವ ಸಮಯ ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.