ಸುಬ್ರಹ್ಮಣ್ಯ: ಒಂಟಿ ಕಾಡಾನೆಯೊಂದು ಯುವಕನ ಮೇಲೆ ದಾಳಿಗೈದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಬ್ರಹ್ಮಣ್ಯದ ಕೊಲ್ಲಮೊಗ್ರದ 500 ಮೀಟರ್ ದೂರದ ಇಡ್ನೂರು ಎಂಬಲ್ಲಿ ಈ ಘಟನೆ ನಡೆದಿದೆ. ಇಂದು (ಮಾ 13ರ) ಮುಂಜಾನೆ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಕೊಲ್ಲಮೊಗ್ರು ಗ್ರಾಮದ ಕೋನಡ್ಕ ನಿವಾಸಿ ಗುರುಪ್ರಸಾದ್ ( 21) ಆನೆ ದಾಳಿಗೆ ತುತ್ತಾಗಿ ಗಾಯಗೊಂಡ ಯುವಕ.
ಹಾಲು ಡೈರಿಗೆ ತನ್ನ ಮನೆಯಿಂದ ಎಂದಿನಂತೆ ಬೈಕಿನಲ್ಲಿ ಹಾಲು ಸಾಗಿಸುತ್ತಿದ್ದಾಗ ಒಂಟಿ ಸಲಗ ಅಡ್ಡ ಬಂದಿದೆ. ಅನೆ ದಾಳಿಯಾಗುತ್ತಲೇ ಯುವಕ ಬೈಕ್ ನಿಂದ ಉರುಳಿ ಕೆಳಗೆ ಬಿದ್ದಿದ್ದು ಅಲ್ಲಿಂದ ಅವರನ್ನು 50 ಮೀ ದೂರದವರೆಗೆ ಸೊಂಡಿಲಿನ ಸಹಾಯದಿಂದ ಎಳೆದುಕೊಂಡು ಹೋಗಿದೆ. ಅಡಿಕೆ ಕೀಳಲು ಹೋಗುತ್ತಿದ್ದ ಕಾರ್ಮಿಕರೊಬ್ಬರು ದೂರದಿಂದ ನೋಡಿ ಜೋರಾಗಿ ಕಿರುಚಾಡಿದ್ದು ಈ ವೇಳೆ ಸ್ಥಳೀಯರು ಓಡಿ ಬಂದಿದ್ದಾರೆ. ಈ ವೇಳೆ ಆನೆ ಯುವಕನನ್ನು ಬಿಟ್ಟು ಕಾಡಿನತ್ತ ಹೋಗಿದೆ.
ಸ್ಥಳೀಯರು ಗಾಯಾಳುವನ್ನು ಜೀಪಿನ ನೆರವಿನಿಂದ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು ಸ್ಥಿತಿ ಚಿಂತಜನಕವಾಗಿದೆ. ಜನವಸತಿ ಪ್ರದೇಶದಲ್ಲಿಯೇ ಆನೆ ದಾಳಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.