ಸುರತ್ಕಲ್ : ಎನ್ ಐಟಿಕೆ ಟೋಲ್ ಗೇಟ್ ವಿರುದ್ಧ ಅಹೋರಾತ್ರಿ ಧರಣಿ ಕುಳಿತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಭಾಂಧವ ಅವರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಕೇಸ್ ದಾಖಲಾಗಿದೆ.
ಕೆಲ ದಿನಗಳಿಂದ ಸುರತ್ಕಲ್ ಬಳಿಯ ಎನ್ ಐಟಿಕೆಯ ಟೋಲ್ ಅನಧಿಕೃತವಾಗಿದ್ದು, ಇದನ್ನು ತೆರವುಗೊಳಿಸುವಂತೆ ವಿಶಿಷ್ಟವಾಗಿ ಧರಣಿ ನಡೆಸುತ್ತಿದ್ದಾರೆ ಆಸಿಫ್.
ಫೆ.15 ರ ಮಧ್ಯರಾತ್ರಿ ಮಂಗಳಮುಖಿಯರು ಧರಣಿ ನಡೆಸುವ ಸ್ಥಳಕ್ಕೆ ಆಗಮಿಸಿ ಅಡ್ಡಿಪಡಿಸಿರುವ ಬಗ್ಗೆ ಆಸಿಫ್ ಪೊಲೀಸ್ ದೂರು ದಾಖಲಿಸಿದ್ದರು. ಮಂಗಳಮುಖಿಯರು ಕೂಡಾ ಈ ವಿಚಾರವಾಗಿಯೇ ಆಸಿಫ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಈ ವಿಚಾರವಾಗಿ ತಮ್ಮ ಮೇಲೆ ಜಾಮೀನು ರಹಿತ ಮೊಕ್ಕದ್ದಮೆ ದಾಖಲಾಗಿರುತ್ತದೆ. ಆದ್ದರಿಂದ ತನಿಖೆಗೆ ಠಾಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಪ್ರತಿಭಟನೆಯನ್ನು ನಡೆಸಲು ಆಸಿಫ್ ಯಾವುದೇ ಇಲಾಖೆಯಿಂದ ಅನುಮತಿಯನ್ನು ತೆಗೆದುಕೊಂಡಿಲ್ಲ. ಅದರ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲಿ ಅಹಿತಕರ ಘಟನೆ ನಡೆದರೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಬಹುದು. ಹೀಗಾಗಿ ಅಗತ್ಯ ನಿಯಮಗಳ ಅನುಸಾರ ಅಲ್ಲಿನ ಪರಿಸ್ಥಿತಿ ಅನುಸಾರವಾಗಿ ಅಗತ್ಯ ಕ್ರಮ ಕೈಗೊಳ್ಳಲು ನಮ್ಮ ಸ್ಥಳೀಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದರು.