ಸುಳ್ಯ: ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಯಿಂದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಘಟನೆ ಸುಳ್ಯ ತಾಲೂಕಿನ ಮರ್ಕಂಜದ ತೇರ್ಥಮಜಲು ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಬಂಟ್ವಾಳ: ಹೆಂಡತಿಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ತಮ್ಮನನ್ನು ಬರ್ಬರವಾಗಿ ಹತ್ಯೆಗೈದ ಅಣ್ಣ!
ತೇರ್ಥಮಜಲು ಬಳಿಯ ಸೂಟೆಗದ್ದೆ ದಾಮೋದರ ಪೂಜಾರಿ ಎಂಬವರ ಮನೆಯಲ್ಲಿ ತೋಟ ಲೀಸಿಗೆ ತೆಗೆದುಕೊಳ್ಳಲು ತಂದಿರಿಸಿದ್ದ 62,000 ಮತ್ತು ಪತ್ನಿ, ಮಕ್ಕಳ ಒಟ್ಟು 6 ಪವನ್ ಚಿನ್ನಾಭರಣ ಕಳವಾಗಿದೆ.
ದಾಮೋದರ ಅವರನ್ನು ಅವರ ಆಪ್ತರು ಜು.31ರಂದು ಸಂಜೆ ಸುಬ್ರಹ್ಮಣ್ಯಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬಳಿಕ ರಾತ್ರಿ ವೇಳೆಗೆ ಅವರು ಮನೆಗೆ ವಾಪಾಸು ಬಂದಿದ್ದರು ಈ ವೇಳೆಯಲ್ಲಿ ಅವರಿಗೆ ಮನೆಯೊಳಗೆ ಅಡುಗೆ ಕೋಣೆಯಲ್ಲಿ ಚೆಲ್ಲಾಡಿರುವುದು ಕಂಡು ಬಂದಿದ್ದು, ಅಲ್ಲದೇ ಅವರ ಪಕ್ಕದ ಕೋಣೆಯಲ್ಲಿಯೂ ವ್ಯತ್ಯಾಸ ಗಮನಿಸಿದಾಗ ಹಣ ಹಾಗೂ ಚಿನ್ನಾಭರಣ ಕಳವುಗೈದಿರುವುದು ಗಮನಕ್ಕೆ ಬಂದಿದೆ.
ಕಳವುಗೈಯುವ ಉದ್ದೇಶದಿಂದ ದಾಮೋದರ ಅವರನ್ನು ಈ ಆಪ್ತರು ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿರಬೇಕೆಂದು ದಾಮೋದರರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ ದಾಮೋದರ ಅವರು ಸುಳ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.