ಇಲ್ಲೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಡಿದರೂ ಆತ ಸಿಗಲಿಲ್ಲ. ಸುಮಾರು 50 ದಿನಗಳ ಬಳಿಕ ಕೊಲೆಯಾದವನ ಅಸ್ಥಿಪಂಜರ ಪತ್ತೆಯಾಗಿದೆ. ಇಬ್ಬಿಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆ ಈತನ ಕಥೆ ಕ್ಲೋಸ್ ಮಾಡಿದ್ದಾಳೆ. ಆದ್ರೆ ತನಿಖೆಗೆ ಇಳಿದ ಪೊಲೀಸರು ಆಕೆಗೆ ಕೋಳ ತೊಡಿಸಿದ್ದಾರೆ.
ರಾಯಚೂರು ಮೂಲದ ದೊಡ್ಡಲಿಂಗಪ್ಪ (45) ಕೊಲೆಯಾದ ವ್ಯಕ್ತಿ. ಲಕ್ಷ್ಮೀ ಎಂಬಾಕೆ ದೊಡ್ಡಲಿಂಗಪ್ಪ ಮತ್ತು ವೆಂಕಟೇಶ್ ಎಂಬವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಲಕ್ಷ್ಮೀ ಮತ್ತು ವೆಂಕಟೇಶ್ ಸೇರಿಕೊಂಡು ದೊಡ್ಡಲಿಂಗಪ್ಪ ಎಂಬವನನ್ನು ಕೊಲೆಗೈದಿದ್ದಾರೆ. ಜು. 2ರಂದು ತುಮಕೂರಿನ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ಅಸ್ಥಿಪಂಜರ ಪತ್ತೆಯಾಗಿದೆ. ಪ್ರಕರಣ ಭೇದಿಸಿದ ಪೊಲೀಸರಿಗೆ ಮಹತ್ವದ ತಿರುವು ಸಿಕ್ಕಿತ್ತು.
ದೊಡ್ಡಲಿಂಗಪ್ಪನ ತಲೆ ಮೇಲೆ ಲಕ್ಷ್ಮೀ ಹಾಗೂ ವೆಂಕಟೇಶ್ ಜತೆಯಾಗಿ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದರು. ಬಳಿಕ ದೊಡ್ಡಲಿಂಗಪ್ಪನ ಬೈಕ್ನಲ್ಲೇ ಆತನ ಶವವನ್ನು ಸಾಗಿಸಿ, ನೆಲಮಂಗಲದ ಕಳಲುಘಟ್ಟ ಬ್ರಿಡ್ಜ್ ಕೆಳಗೆ ಎಸೆದು ಹೋಗಿದ್ದರು. ದೊಡ್ಡಲಿಂಗಪ್ಪನ ಪತ್ನಿ ಯಲ್ಲಮ್ಮ ಪತಿ ಕಾಣೆಯಾಗಿರುವ ಕುರಿತು ಜು.9ರಂದು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮೀ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದಿದ್ದ ಪೊಲೀಸರು ಲಕ್ಷ್ಮೀ-ವೆಂಕಟೇಶ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಾಯಿಬಿಟ್ಟಿದ್ದಾರೆ. ಆರೋಪಿಗಳು ನೀಡಿದ್ದ ಮಾಹಿತಿ ಮೇರೆಗೆ ಶವ ಎಸೆಯಲಾಗಿದ್ದ ಸ್ಥಳಕ್ಕೆ ತುಮಕೂರಿನ ಜಯನಗರ ಪೊಲೀಸರು ತೆರಳಿ ಸ್ಥಳ ಮಹಜರು ನಡೆಸಿದ್ದಾರೆ.
ಲಕ್ಷ್ಮಿಯ ತಂದೆಗೆ ದೊಡ್ಡಲಿಂಗಯ್ಯ 30 ಸಾವಿರ ರೂ. ಸಾಲ ನೀಡಿದ್ದರು. ಅಲ್ಲದೆ ಕೊಟ್ಟ ಹಣ ವಾಪಸ್ ಕೇಳುತ್ತಿದ್ದರು. ಜತೆಗೆ ಬೇರೆ ವಿಚಾರಗಳಲ್ಲೂ ತೊಂದರೆ ಕೊಡುತ್ತಿದ್ದರು ಎನ್ನಲಾಗಿದೆ. ಮಾತ್ರವಲ್ಲದೆ ಇಬ್ಬರ ಅನೈತಿಕ ಸಂಬಂಧಕ್ಕೂ ಆತ ಅಡ್ಡಿಯಾಗುತ್ತಾರೆ ಅಂತ ಇಬ್ಬರೂ ಸೇರಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ಈ ಕೊಲೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬಳ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.