
ಕರಾವಳಿಯಲ್ಲಿ ಹತ್ತು ದಿನಗಳಲ್ಲಿ ಮೂವರು ಯುವಕರು ಹತ್ಯೆಗೀಡಾಗಿದ್ದು, ನಿಷ್ಕಲ್ಮಶ ಜೀವಗಳ ಸಾವು ನಿಜಕ್ಕೂ ಕರುಳನ್ನು ಹಿಂಡುವಂತಿದೆ. ದುಷ್ಕರ್ಮಿಗಳ ತಂಡದಿಂದ ಹತ್ಯೆಯಾದ, ತನ್ನ ಪಾಡಿಗೆ ತಾನಿದ್ದ 23 ವರ್ಷದ ಯುವಕ ಮುಹಮ್ಮದ್ ಫಾಝಿಲ್ ರನ್ನು ಹಂತಕರು ಗುರಿಯಾಗಿಸಿಕೊಂಡದ್ದೇಕೆ ಎನ್ನುವುದೇ ಸದ್ಯ ಪ್ರಶ್ನೆಯಾಗಿ ಕಾಡುತ್ತಿದೆ.

ಮಂಗಲಪೇಟೆಯ ನಿವಾಸಿ ಫಾರೂಕ್ ಮತ್ತು ಜೈನಾಬಿ ದಂಪತಿಗಳ 2 ನೇ ಪುತ್ರನಾಗಿದ್ದ ಫಾಝಿಲ್ ಬಡತನದಲ್ಲಿ ಬೆಳೆದರೂ ಸ್ವಾಭಿಮಾನಿಯಾಗಿದ್ದ. ಪದವೀಧರ, ಅವಿವಾಹಿತ. ಎಚ್ ಪಿಸಿ ಎಲ್ ಕಂಪನಿಯಲ್ಲಿ ಗ್ಯಾಸ್ ಲೋಡಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಂದಿಗೂ ಯಾರಿಗೂ ಕೇಡು ಬಗೆದವರಲ್ಲ, ಯಾವ ಪಕ್ಷ , ಸಂಘಟನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡವರಲ್ಲ. 2018 ರಲ್ಲಿ ಕಾಲೇಜು ದಿನಗಳಲ್ಲಿ ಸರ್ವ ಕಾಲೇಜು ಯೂನಿಯನ್ ನಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದು ಬಿಟ್ಟರೆ, ಯಾರೊಂದಿಗೂ ಶತ್ರುತ್ವವೂ ಇರಲಿಲ್ಲ, ಆದರೂ ಹಂತಕರೂ ಅವರನ್ನೇಕೆ ಗುರಿಯಾಗಿಸಿದರೂ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.??.
ಹಂತಕರ ಟಾರ್ಗೆಟ್ ಫಾಝಿಲ್ ಆಗಿರಲಿಲ್ವ.!??
ಅಸಲಿಗೆ ಸುರತ್ಕಲ್ನಲ್ಲಿ ಹತ್ಯೆಗೀಡಾದ ಫಾಝಿಲ್ ನಿಜವಾದ ಟಾರ್ಗೆಟ್ ಆಗಿರಲಿಲ್ಲ. ಹಂತಕರು ಮುಸ್ಲಿಂ ಉದ್ಯಮಿಯೊಬ್ಬರನ್ನು ಗುರಿ ಮಾಡಿ ಕೊಲೆ ಮಾಡಲು ಸಂಚು ನಡೆಸಿತ್ತು. ಉದ್ಯಮಿಯೊಬ್ಬರನ್ನು ಗುರಿಯಾಗಿಸಿ ದಾಳಿ ಮಾಡಿದ್ದರು ಎನ್ನುವ ಅನುಮಾನ ವ್ಯಕ್ತವಾಗಿದೆ. ಆ ವ್ಯಕ್ತಿ SDPI ಮುಖಂಡ ಎನ್ನಲಾಗಿದೆ.

ಟಾರ್ಗೆಟ್ ಮಾಡಿದ್ದ ವ್ಯಕ್ತಿಯನ್ನು ಹತ್ಯೆ ಮಾಡಬೇಕೆಂದು ಪ್ಲಾನ್ ಮಾಡಿದ್ದಾರೆ. ಹತ್ಯೆ ಮಾಡಲು ಬಂದಾಗ ಅಂಗಡಿಯ ಬಳಿ ಫಾಜಿಲ್ ನಿಂತಿದ್ದ. ತಕ್ಷಣಕ್ಕೆ ನೋಡಲು ಫಾಝಿಲ್ ಟಾರ್ಗೆಟ್ ಮಾಡಿದ್ದ ವ್ಯಕ್ತಿಯಂತೆ ಕಂಡು ಫಾಝಿಲ್ ನನ್ನು ಟಾರ್ಗೆಟ್ ವ್ಯಕ್ತಿ ಎಂದುಕೊಂಡ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಯೇ ಎಂಬ ಅನುಮಾನ ಪೊಲೀಸ್ ತನಿಖೆ ವೇಳೆ ವ್ಯಕ್ತವಾಗುತ್ತಿದೆ. ಫಾಜಿಲ್ ಕುಟುಂಬದ ಆಪ್ತ ಮೂಲಗಳೂ ಇದೇ ರೀತಿ ಹೇಳುತ್ತಿವೆ ಎನ್ನಲಾಗಿದೆ. ಈ ಕುರಿತು ಮತ್ತಷ್ಟು ತನಿಖೆ ನಡೆಸಬೇಕಿದೆ. ನಂತರವಷ್ಟೆ ಖಚಿತವಾಗುತ್ತದೆ. ಎಲ್ಲ ದೃಷ್ಟಿಕೋನದಲ್ಲೂ ಪ್ರಕರಣವನ್ನು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ರೀತಿ ಅನುಮಾನಗಳಿದ್ದರೂ, ಆರೋಪಿಗಳು ಸಿಗದೇ ಏನನ್ನೂ ಹೇಳಲಾಗದು ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

21 ಶಂಕಿತರು ಪೊಲೀಸ್ ವಶಕ್ಕೆ
ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸದ್ಯ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಶೀಘ್ರದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು. ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಫಾಝಿಲ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ 21 ಶಂಕಿತರನ್ನ ನಿನ್ನೆ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ 21 ಶಂಕಿತರ ವಿಚಾರಣೆ ನಡೆದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

