ಬೆಂಗಳೂರು: ಹಣದಾಸೆಗಾಗಿ ಸ್ನೇಹಿತನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಪ್ರಜ್ವಲ್, ಅನಿಲ್ ಕುಮಾರ್, ದೀಪು ಸೇರಿ ಐವರು ಎನ್ನಲಾಗಿದೆ.
ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್, ಕಾಲೇಜು ಮುಗಿದ ನಂತರ ರಿಯಲ್ ಎಸ್ಟೇಟ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈತನ ತಂದೆ ಆಟೋ ಚಾಲಕನಾಗಿದ್ದ ನಾಗರಬಾವಿ ಬಳಿಯ ಪಾಪರೆಡ್ಡಿಪಾಳ್ಯ ಬಳಿ ವಾಸವಾಗಿದ್ದರು. ರಿಯಲ್ ಎಸ್ಟೇಟ್ ಕೆಲಸ ಮಾಡುವ ಕಚೇರಿಯಲ್ಲಿ ನಿರಂತರ ಹಣದ ವಹಿವಾಟು ನಡೆಸುವ ಸಲುವಾಗಿ ಅಭಿಷೇಕ್ ಬಳಿ ಯಾವಾಗಲೂ ನಗದು ಇರುತ್ತಿತ್ತು.
ಇದನ್ನು ಕಂಡ ಸ್ನೇಹಿತರು ಅಭಿಷೇಕ್ ಅಪಹರಣ ಮಾಡಲು ಹೊಂಚು ಹಾಕಿದ್ದಾರೆ. ಅಪಹರಣಕ್ಕಾಗಿ ನೆರವು ಪಡೆಯಲು ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿರುವ ಪ್ರಜ್ವಲ್, ಅನಿಲ್ ಕುಮಾರ್ ಹಾಗೂ ದೀಪು ಎಂಬವರಿಗೆ ಮಾಹಿತಿ ನೀಡಲಾಗಿದ್ದು, ಇದರಂತೆ ಮುಸುಕುವೇಷ ಧರಿಸಿ ಕಾರಿನಲ್ಲಿ ಬಂದು ಅಭಿಷೇಕ್ನನ್ನು ಅಪಹರಿಸಿದ್ದಾರೆ. ಬಳಿಕ ಅಭಿಷೇಕ್ ತಂದೆಗೆ ಕರೆ ಮಾಡಿ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ಅಭಿಷೇಕ್ ನಿಂದ 70 ಸಾವಿರ ಹಣ ಪಡೆದಿದ್ದರು. ಜೊತೆಗೆ, ಅಪಹರಣ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು.