ದಾವಣಗೆರೆ: ಹನಿಮೂನ್ಗೆ ತೆರಳಿದ್ದ ವೇಳೆ ನಡೆದ ದುರಂತದಲ್ಲಿ ಪತಿ ಸಾವನ್ನಪ್ಪಿದ್ದು , ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. 15 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ಜೋಡಿ 2 ದಿನ ಹನಿಮೂನ್ಗೆಂದು ಬೈಕ್ನಲ್ಲಿ ತೆರಳಿದ್ದ ವೇಳೆ ಅಪಘಾತ ನಡೆದಿದೆ.
ಕಳೆದ ಭಾನುವಾರ ರಾತ್ರಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಕೋಡದ ಬಳಿ ರಸ್ತೆ ಅಪಘಾತ ನಡೆದಿತ್ತು. ನವವಿವಾಹಿತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಘಟನೆ ನಡೆದು 5 ದಿನಗಳು ಕಳೆದಿದ್ದು, ಮಕ್ಕಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದ ರಾಜಯ್ಯ ಮತ್ತು ಶೋಭಾ ದಂಪತಿ ಪುತ್ರ ಸಂಜಯ್ (28) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸಂಜಯ್, ಕಳೆದ ತಿಂಗಳು ನ. 28ರಂದು ಬೈಲಹೊಂಗಲದ ಪ್ರೀತಿ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಹದಿನೈದು ದಿನಕ್ಕೆ ಇಬ್ಬರನ್ನು ವಿಧಿ ದೂರ ಮಾಡಿದೆ. ಮೃತ ಸಂಜಯ್ ಪತ್ನಿ ಪ್ರೀತಿ ಕೂಡ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ.
ಮದುವೆ ನಂತರ ಎಲ್ಲ ಶಾಸ್ತ್ರಗಳನ್ನು ಮುಗಿಸಿಕೊಂಡ ಸಂಜಯ್ ಮತ್ತು ಪ್ರೀತಿ ಶನಿವಾರ (ದಿನಾಂಕ 10) ಬೆಳಗ್ಗೆ ಬೈಕ್ನಲ್ಲಿ ಹನಿಮೂನ್ಗೆ ತೆರಳಿದ್ದರು. ಸಿಗಂದೂರು ನೋಡಿಕೊಂಡು ಮುರುಡೇಶ್ವರದಲ್ಲಿಯೇ ರಾತ್ರಿ ತಂಗಿದ್ದಾರೆ. ಭಾನುವಾರ (ದಿನಾಂಕ 11) ರ ಬೆಳಗ್ಗೆ ಅಲ್ಲಿಂದ ಶಿರಸಿಗೆ ಬಂದು ಮಾರಿಕಾಂಬಾ ದೇವಿ ದರ್ಶನ ಮಾಡಿಕೊಂಡು ವಾಪಸ್ ಜಿಗಳಿಗೆ ಬರುತ್ತಿರುವಾಗ ಅಪಘಾತ ಸಂಭವಿಸಿದೆ.
ಹಿರೇಕೆರೂರು ತಾಲ್ಲೂಕಿನ ಕೋಡದ ಬಳಿ ಕಬ್ಬಿನ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದೆ. ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಬೈಕ್ನ ಹಿ೦ಬದಿಯಲ್ಲಿದ್ದ ಪ್ರೀತಿಗೂ ತೀವ್ರ ಗಾಯಗಳಾಗಿವೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸಂಜಯ್ ಮತ್ತು ಪ್ರೀತಿ ಅವರನ್ನು ರಾಣಿಬೆನ್ನೂರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ದಾವಣಗೆರೆ ಬಾಪೂಜೆ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಸ೦ಜಯ್ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಪತಿ ಸಾವನ್ನಪ್ಪಿರುವ ಸುದ್ದಿ ಕೇಳಿ ಶಾಕ್ ಆದ ಪ್ರೀತಿ. ಸ್ಟ್ರೆಚರ್ನಲ್ಲಿ ಬಂದು ಸಂಜಯ್ ಮುಖ ನೋಡಿದ್ದಾಳೆ. ಬಳಿಕ ಪ್ರೀತಿ ತನ್ನ ಗಂಡನ ಮುಖವನ್ನು ಸವರಿ ದುಃಖಿಸಿದ ಆ ಕ್ಷಣ ಎಲ್ಲರ ಮನಕಲಕುವಂತಿತ್ತು. ಪ್ರೀತಿ, ಸಂಜಯ್ ಸ್ಥಿತಿ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜಯ್ ಶವವನ್ನು ಜಿಗಳಿಗೆ ತಂದಾಗ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಮುದ್ದಾದ ಜೋಡಿ ಬೇರೆ ಮಾಡಿದ ವಿಧಿಯಾಟಕ್ಕೆ ಜನರು ಹಿಡಿಶಾಪ ಹಾಕಿದ್ದಾರೆ.