ಜೈಪುರ್ : ಒಡಿಶಾದ ಜೈಪುರ್ ನಗರದಲ್ಲಿ ವಿಷಕಾರಿ ಹಾವಿನ ವಿರುದ್ಧವೇ ಪ್ರತೀಕಾರ ತೀರಿಸಿಕೊಂಡ ಅಚ್ಚರಿ ಮೂಡಿಸುವ ಘಟನೆಯೊಂದು ನಡಿದಿದೆ. ವ್ಯಕ್ತಿಯೊಬ್ಬನಿಗೆ ವಿಷಕಾರಿ ಹಾವೊಂದು ಕಚ್ಚಿದ್ದು, ಕೂಡಲೇ ಆತನೂ ಹಲವಾರು ಬಾರಿ ಹಾವನ್ನು ಕಚ್ಚಿ ಕೊಂದು ಹಾಕಿರುವ ಘಟನೆ ನಡೆದಿದೆ. ಈ ವ್ಯಕ್ತಿಯನ್ನು ಒಡಿಶಾ ಜೈಪುರ್ ಜಿಲ್ಲೆಯ ಗಂಭಾರಿಪಾಟಿಯಾ ಗ್ರಾಮದ 45 ವರ್ಷದ ಬುಡಕಟ್ಟು ಜನಾಂಗದ ವ್ಯಕ್ತಿ ಕಿಶೋರ್ ಬದ್ರಾ ಎಂದು ಗುರುತಿಸಲಾಗಿದೆ.
ಕಿಶೋರ್ ಹೇಳಿಕೆಯ ಪ್ರಕಾರ, ತನ್ನ ಗದ್ದೆಯಲ್ಲಿ ಕೆಲಸ ಪೂರೈಸಿದ ನಂತರ ಬುಧವಾರ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿದ್ದು, ಕೂಡಲೇ ನಾನು ಹಾವನ್ನು ಹಿಡಿದು ವಾಪಸ್ ಕಚ್ಚಿ ಪ್ರತೀಕಾರ ತೀರಿಸಿಕೊಂಡಿರುವುದಾಗಿ ತಿಳಿಸಿದ್ದಾನೆ. ರಾತ್ರಿ ನಾನು ಗದ್ದೆಯ ಕೆಲಸ ಪೂರೈಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಏನೋ ಕಚ್ಚಿದಂತಾಯಿತು. ಆಗ ನಾನು ನನ್ನ ಟಾರ್ಜ್ ನಿಂದ ಬೆಳಕು ಹಾಕಿ ನೋಡಿದಾಗ ವಿಷಕಾರಿ ಹಾವು ಕಂಡುಬ0ದಿದ್ದು, ಕೂಡಲೇ ಅದನ್ನು ಹಿಡಿದು ಹಲವಾರು ಬಾರಿ ಕಚ್ಚಿದೆ. ಇದರ ಪರಿಣಾಮ ಹಾವು ಸತ್ತು ಹೋಗಿರುವುದಾಗಿ ಬದ್ರಾ ತಿಳಿಸಿದ್ದಾನೆ ಎನ್ನಲಾಗಿದೆ.
ಘಟನೆಯ ನಂತರ ಸತ್ತು ಹೋದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಬಂದು ಪತ್ನಿಗೆ ನಡೆದ ವಿಷಯವನ್ನು ತಿಳಿಸಿರುವುದಾಗಿ ವಿವರಿಸಿದ್ದಾನೆ. ಬದ್ರಾ ಸಾಂಪ್ರದಾಯಿಕ ಗಿಡಮೂಲಿಕೆ ಔಷಧವನ್ನು ಮಾಡಿದ್ದು, ಬಳಿಕ ಕೆಲವರ ಸಲಹೆ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಹಾವು ಕಚ್ಚಿದ ನಂತರ ನನಗೆ ಯಾವುದೇ ಅಸ್ವಸ್ಮತೆ ಕಾಣಿಸಿಕೊಂಡಿಲ್ಲ. ನಾನು ಸಾಂಪ್ರದಾಯಿಕ ಗಿಡಮೂಲಿಕೆ ಔಷಧವನ್ನು ತೆಗೆದುಕೊಂಡ ನಂತರ ಗುಣಮುಖನಾಗಿದ್ದೇನೆ ಎಂದಿದ್ದಾನೆ.