ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆನೆಗಳ ದಾಳಿಗೆ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.
ಇದೀಗ ಮತ್ತೋರ್ವ ತೋಟದ ಕಾರ್ಮಿಕ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದಾನೆ. ಕಬ್ಬಿನಗದ್ದೆ ಗ್ರಾಮದ ರವಿಕುಮಾರ್ (48) ಆನೆ ತುಳಿತಕ್ಕೆ ಒಳಗಾಗಿ ಸಾವಿಗೀಡಾದ ಕಾಫಿ ತೋಟದ ಕೂಲಿ ಕಾರ್ಮಿಕನಾಗಿದ್ದಾನೆ. ಇಂದು ಬೆಳಗ್ಗೆ ಬಾಳುಪೇಟೆಯ ಬಿ. ಡಿ. ವಿಶ್ವ ನಾಥ್ ಅವರ ಕಬ್ಬಿನಗದ್ದೆ ಗ್ರಾಮದಲ್ಲಿರುವ ತೋಟಕ್ಕೆ ಕೆಲಸಕ್ಕೆ ಹೋಗಿದ್ದರು.
ಕಾಫಿ ಗಿಡಗಳ ಮಧ್ಯೆ ಇದ್ದ ಕಾಡಾನೆಗಳು, ಏಕಾಏಕಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕಾಡಾನೆಗಳ ದಾಳಿಯಿಂದ ಪಾರಾಗಲು ಪ್ರಯತ್ನ ಮಾಡಿದ್ದರೂ ಸಾಧ್ಯವಾಗದೆ ಕಾಡಾನೆ ದಾಳಿಗೆ ರವಿಕುಮಾರ್ ಬಲಿಯಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಬಸವರಾಜ್ ಸೇರಿದಂತೆ, ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದ್ದಾರೆ ಹೊರತು ಆನೆಗಳ ಸ್ಥಳಾಂತರಕ್ಕೆ ಶಾಶ್ವತ ಪರಿಹಾರವನ್ನು ಯಾವ ಸರ್ಕಾರವಾಗಲಿ ಅಥವಾ ಸರ್ಕಾರದ ಅಧಿಕಾರಿಗಳಾಗಲಿ ಮಾಡದಿರುವುದು ರೈತರ ಜೀವಕ್ಕೆ ಕುತ್ತು ತರುತ್ತಿದೆ.