ಹಾಸನ: ನಿರಂತರವಾಗಿ ಸುರಿಯುತ್ತಿದ್ದ ಮಳೆ ಕಡಿಮೆಯಾದ ಹಿನ್ನೆಲೆ ಮಂಗಳೂರು- ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್ನಲ್ಲಿ ಇಂದಿನಿಂದ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಕೆಲವು ವಾಹನ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ಕಾರು, ಬಸ್, ಟೆಂಪೋ, ಸೇರಿ 6 ಚಕ್ರದ ವಾಹನ ಸಹಿತ 20 ಟನ್ ಸಾಮರ್ಥ್ಯದ ವಾಹನಗಳು ಶಿರಾಡಿಘಾಟ್ನಲ್ಲಿ ಎಂದಿನಂತೆ ಸಂಚರಿಸಬಹುದು ಎಂದು ಹಾಸನ ಡಿಸಿ ಆರ್.ಗಿರೀಶ್ ತಿಳಿಸಿದ್ದಾರೆ.
ಆದರೆ ಬುಲೆಟ್ ಟ್ಯಾಂಕರ್, ಕಂಟೈನರ್, ಲಾಂಗ್ ಚೇಸೀಸ್ ವಾಹನ, ಟ್ರೈಲರ್ ಮತ್ತು ಎಲ್ಲಾ ಬಗೆಯ 20 ಟನ್ಗಿಂತ ಅಧಿಕ ಭಾರದ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ ಮುಂದುವರೆದಿದೆ. ಭಾರಿ ಮಳೆಯಿಂದಾಗಿ ಜುಲೈ 15ರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ದೋಣಿಗಲ್ ಬಳಿ 2 ಕಡೆ ಭೂಕುಸಿತ ಮತ್ತು ರಸ್ತೆ ಕುಸಿತ ಉಂಟಾಗಿತ್ತು. ಆಗ ಮುಂಜಾಗ್ರತಾ ಕ್ರಮವಾಗಿ ಹಾಸನ ಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು.ಈ ಮಧ್ಯೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುವ ಹಿನ್ನೆಲೆ ಸಂಚಾರಕ್ಕೆ ಇದೀಗ ಅನುಮತಿ ನೀಡಲಾಗಿದೆ.