Wednesday, August 5, 2026
spot_imgspot_img
spot_imgspot_img

ಹಿಂದೂಗಳ ಧಾರ್ಮಿಕ ಭಾವನೆಗೆ ಅವಮಾನದ ಆರೋಪ; ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್​ ಮಹೇಶ್ವರಿ ವಿರುದ್ಧ ದೂರು

- Advertisement -
- Advertisement -

ಟ್ವಿಟರ್ ಇಂಡಿಯಾ ಮತ್ತು ಅದರ ಮುಖ್ಯಸ್ಥ ಮನೀಶ್​ ಮಹೇಶ್ವರಿ ವಿರುದ್ಧ ದೆಹಲಿ ಮೂಲದ ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಎಫ್​ಐಆರ್​ ರಿಜಿಸ್ಟರ್​ ಮಾಡುವಂತೆ ಕೋರಿದ್ದಾರೆ. ಟ್ವಿಟರ್ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ ಮತ್ತು ಕೋಮು ದ್ವೇಷವನ್ನು ಹರಡುವ ಕೆಲಸ ಮಾಡಿದೆ ಎಂದು ಈ ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಕೀಲರಾದ ಆದಿತ್ಯ ಸಿಂಗ್​ ದೇಶ್ವಾಲ್​ ಟ್ವಿಟರ್​ ಇಂಡಿಯಾ ಮತ್ತು ಅದರ ಮುಖ್ಯಸ್ಥನ ವಿರುದ್ಧ ದೂರು ನೀಡಿದ್ದು, ಹಿಂದೂಗಳು ಪೂಜಿಸುವ ಕಾಳಿ ಮಾತೆಯ ಚಿತ್ರವನ್ನು ಟ್ವಿಟರ್​ ಬಳಕೆದಾರರೊಬ್ಬರು (ಅಥೀಸ್ಟ್ ರಿಪಬ್ಲಿಕ್​) ಆಕ್ಷೇಪಾರ್ಹ ರೀತಿಯಲ್ಲಿ ಪದೇಪದೆ ಪೋಸ್ಟ್​ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಳಿ ಮಾತೆಯ ತುಂಬ ವ್ಯಂಗ್ಯವಾದ ರೀತಿಯ ಕಾರ್ಟೂನ್​, ಗ್ರಾಫಿಕ್​​ಗಳನ್ನು ಈ ಟ್ವಿಟರ್​ ಅಕೌಂಟ್​​ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಹಿಂದೂ ಧರ್ಮ, ಹಿಂದೂ ದೇವತೆಗಳನ್ನು ಅವಮಾನಿಸುವ ಸಲುವಾಗಿ ಕಾಳಿ ದೇವಿ ಚಿತ್ರವನ್ನು ತುಂಬ ಅಸಹ್ಯಕರವಾಗಿ ಪದೇಪದೆ ಪೋಸ್ಟ್ ಮಾಡುತ್ತಿದ್ದರೂ ಟ್ವಿಟರ್​ ಕ್ರಮ ತೆಗೆದುಕೊಂಡಿಲ್ಲ ಎಂದು ಆದಿತ್ಯ ಸಿಂಗ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಅಥೀಸ್ಟ್​ ರಿಪಬ್ಲಿಕ್​ ಯಾವಾಗಲೂ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಯನ್ನು ಕೆರಳಿಸುವಂತ ಪೋಸ್ಟ್​ಗಳನ್ನೇ ಮಾಡುತ್ತಿರುತ್ತದೆ.

ಈ ಮೂಲಕ ದೇಶದಲ್ಲಿ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದೂ ದೇಶ್ವಾಲ್​ ಹೇಳಿದ್ದಾರೆ. ಈ ಟ್ವಿಟರ್​ ಬಳಕೆದಾರ ಕೇವಲ ನಿಂದನಾತ್ಮಕವಾಗಿ ಟ್ವೀಟ್​ಗಳನ್ನು ಮಾಡುತ್ತಿಲ್ಲ. ಬದಲಾಗಿ ಸಮಾಜದಲ್ಲಿ ಅಸ್ವಸ್ಥತೆ, ಅನನುಕೂಲತೆ, ಅಪಾಯ, ಅಡಚಣೆ, ಅವಮಾನ, ದ್ವೇಷವನ್ನು ಹುಟ್ಟುಹಾಕುವ ರೀತಿಯಲ್ಲಿ ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ ಎಂದೂ ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಟ್ವಿಟರ್​ ಬಳಕೆದಾರ ಇಷ್ಟೆಲ್ಲ ದ್ವೇಷ ಹುಟ್ಟುಹಾಕುತ್ತಿದ್ದರೂ ಮುಖ್ಯಸ್ಥ ಮನೀಶ್​ ಮಹೇಶ್ವರಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಂಥ ಟ್ವೀಟ್​ಗಳನ್ನು ತೆಗೆದುಹಾಕುತ್ತಿಲ್ಲ. ಟ್ವಿಟರ್​ ಅಕೌಂಟ್​​ನ್ನು ಲಾಕ್​ ಮಾಡುತ್ತಿಲ್ಲ ಎಂದೂ ವಕೀಲ ಆದಿತ್ಯ ಸಿಂಗ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೆಹಲಿ ಪೊಲೀಸರು ಇನ್ನೂ ಎಫ್​ಐಆರ್​ ದಾಖಲಿಸಲಿಲ್ಲ.

ಒಟ್ಟಾರೆ ಭಾರತದಲ್ಲಿ ಟ್ವಿಟರ್ ಒಂದಲ್ಲ ಒಂದು ಕಾರಣಕ್ಕೆ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳನ್ನು ಅಳವಡಿಸಿಕೊಳ್ಳಲು ಮೊದಲು ಟ್ವಿಟರ್ ಆಕ್ಷೇಪ ಎತ್ತಿತ್ತು. ಅದಾದ ನಂತರ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ವಿರುದ್ಧ ಸಂಘರ್ಷ ಏರ್ಪಟ್ಟಿತ್ತು.

ಉತ್ತರ ಪ್ರದೇಶದ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ನಡೆದ ವಿಡಿಯೋ ಪೋಸ್ಟ್​ ಸಂಬಂಧಪಟ್ಟಂತೆ ಮನೀಶ್​ ಮಹೇಶ್ವರಿ ವಿರುದ್ಧ ಉತ್ತರಪ್ರದೇಶದಲ್ಲಿ ಎಫ್​ಐಆರ್ ದಾಖಲಾಗಿತ್ತು. ಆದರೆ ಅವರ ಬಂಧನಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು. ಅದಾದ ಬಳಿಕ ಭಾರತ ಭೂಪಟವನ್ನು ತಪ್ಪಾಗಿ ತೋರಿಸಿದ್ದರಿಂದ ಮತ್ತೆ ಉತ್ತರಪ್ರದೇಶದ ಭಜರಂಗ ದಳ ಕಾರ್ಯಕರ್ತರೊಬ್ಬರು ಮನೀಶ್ ಮಹೇಶ್ವರಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ಇದೀಗ ಮತ್ತೊಂದು ದೂರು ನೀಡಲಾಗಿದೆ.

- Advertisement -

Related news

error: Content is protected !!