ಅಂಗಡಿಗೆ ಹೋಗಿ ಬರುವುದಾಗಿ ಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ವಾಪಸಾಗಿಲ್ಲ. ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಈ ಮೊದಲು ಯುವತಿ ಮುಸ್ಲಿಂ ಯುವಕನ ಜೊತೆಗಿನ ಲವ್ವಿ ಡವ್ವಿ ವಿಚಾರ ಪೋಷಕರಿಗೆ ತಿಳಿದು ಬುದ್ಧಿವಾದ ಹೇಳಿದ್ದಾರೆ. ಆದ್ರೆ ಆಕೆ ಅದ್ಯಾವುದಕ್ಕೂ ಕಿವಿಗೊಡದೆ ಪ್ರಿಯಕರನೊಂದಿಗೆ ತೆರಳಿದ್ದಾನೆ. ಈಗ ಪೊಲೀಸರು ಸೈಯದ್ ಮೋಯಿನ್ನನ್ನು ಬಂಧಿಸಿದ್ದಾರೆ.
ಹಿಂದೂ ಯುವತಿಯನ್ನು ಪ್ರೀತಿಸಿ ಆಂಧ್ರಪ್ರದೇಶದ ದರ್ಗಾಕ್ಕೆ ಕರೆದೊಯ್ದು ಮತಾಂತರ ಮಾಡಿದ್ದಾನೆ ಎಂಬ ಆರೋಪದಡಿ ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ಬಿ.ಕೆ.ನಗರ ನಿವಾಸಿ ಸೈಯದ್ ಮೋಯಿನ್(23) ಬಂಧಿತ ಆರೋಪಿ. ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಅ.5ರಂದು ತನ್ನದೇ ಬಡಾವಣೆಯ 18 ವರ್ಷದ ಯುವತಿಯನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ದು ಮತಾಂತರ ಮಾಡಿದ್ದಾನೆ.
ಉತ್ತರಪ್ರದೇಶ ಮೂಲದ ದಂಪತಿ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತನ್ನದೇ ಬಡಾವಣೆಯ ಸೈಯದ್ ಮೋಯಿನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆರು ತಿಂಗಳ ಹಿಂದೆಯಷ್ಟೇ ಈ ವಿಚಾರ ಪೋಷಕರಿಗೆ ತಿಳಿದು ಪೋಷಕರು ಯುವತಿಗೆ ಬುದ್ಧಿವಾದ ಹೇಳಿದ್ದರು.
ಅ.5ರಂದು ಸಂಜೆ 4ಕ್ಕೆ ಅಂಗಡಿಗೆ ಹೋಗಿ ಬರುವುದಾಗಿ ಹೊರಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ವಾಪಸಾಗಿಲ್ಲ. ಈ ವೇಳೆ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಸೈಯದ್ ಮೋಯಿನ್ ಜತೆಗೆ ಯುವತಿ ಹೋಗಿರಬಹುದು ಎಂದು ಪೋಷಕರು ಅನುಮಾನಿಸಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಇದೀಗ ಆರೋಪಿ ಸೈಯದ್ ಮೋಯಿನ್ನನ್ನು ಬಂಧಿಸಿದ್ದಾರೆ.
ಯುವತಿ ಸ್ವಯಂ ಪ್ರೇರಣೆಯಿಂದ ಮತಾಂತರವಾಗಿದ್ದಾಳೋ ಅಥವಾ ಆರೋಪಿ ಬಲವಂತವಾಗಿ ಮತಾಂತರ ಮಾಡಿಸಿದ್ದಾನೋ ಎನ್ನುವುದು ಮುಂದಿನ ತನಿಖೆಯಲ್ಲಿ ತಿಳಿದು ಬರಲಿದೆ. ಸದ್ಯಕ್ಕೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.