ಇರಾನ್ನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ಧದ ಪ್ರತಿಭಟನೆ ಉಗ್ರ ರೂಪಕ್ಕೆ ತಾಳಿರೋದು ತಿಳಿದೇ ಇದೆ. ಹಿಜಾಬ್ ವಿರುದ್ಧ ಕಿಡಿ ಕಾರಿದ್ದಕ್ಕೆ ಈಗಾಗಲೇ ಸಾಕಷ್ಟು ಹತ್ಯೆಗಳು ನಡೆದಿದೆ. ಹಿಜಾಬ್ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಬಂಧನಕ್ಕೆ ಒಳಗಾಗಿದ್ದ ಖ್ಯಾತ ಬಾಣಸಿಗ ಮೆಹರ್ಷಾದ್ ಶಾಹಿದಿ ಪೊಲೀಸರ ದೌರ್ಜನಕ್ಕೆ ಬಲಿಯಾಗಿದ್ದಾನೆ.
ಜೇಮೀ ಆಲಿವರ್ ಎಂದೇ ಖ್ಯಾತನಾಗಿದ್ದ ಶಾಹಿದಿ(19) ಸಾವೀಗೀಡಾದ ಬಾಣಸಿಗ. ಈತನ ಸಾವು ಖಂಡಿಸಿ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ, ತನ್ನ 20ನೇ ಹುಟ್ಟುಹಬ್ಬದ ಒಂದು ದಿನದ ಮೊದಲು ಆತ ಮೃತಪಟ್ಟಿದ್ದಾನೆ.
ಹಿಜಾಬ್ ಪ್ರಕರಣದಲ್ಲಿ ಬಂಧಿತಳಾಗಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಮಹ್ಸಾ ಅಮಿನಿ ಸಾವು ಖಂಡಿಸಿ ಇರಾನ್ನ ಅರ್ಕ ನಗರದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಶಾಹಿದಿ ಭಾಗವಹಿಸಿದ್ದಕ್ಕೆ ಅವರನ್ನು ಇರಾನ್ ಪೊಲೀಸರು ಬಂಧಿಸಿದ್ದರು. ಪೊಲೀಸರು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಕಾರಣ ಅವರ ಸಾವಾಗಿದೆ ಎಂದು ವರದಿಯಾಗಿದೆ. ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದಿದ್ದಾರೆ.