ಅಂಕೋಲಾ ರಾ.ಹೆ. 63ರ ಯಲ್ಲಾಫುರ-ಅಂಕೋಲಾ ಮಾರ್ಗಮಧ್ಯ ಸುಂಕಸಾಳ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಒಂದರಲ್ಲಿ ಲಾರಿ ಕ್ಲೀನರ್ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಲಾರಿ ಮಾಲಕ ಕಾಲಿಗೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡುರಾತ್ರಿ ನಡೆದಿದೆ. ಹಾವೇರಿ ರಾಣೇಬೆನ್ನೂರು ಮೂಲದ ಬಸವರಾಜ (22) ಮೃತ ದುರ್ದೈವಿಯಾಗಿದ್ದಾನೆ.
ಹಾವೇರಿಯಿಂದ ಸಿಮೆಂಟ್ ಶೀಟ್ ಗಳನ್ನು ಗೋವಾ ಕಡೆ ಸಾಗಿಸುತ್ತಿದ್ದ ಲಾರಿ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಕಡೆ ಬರುತ್ತಿದ್ದಾಗ ದಾರಿ ಮಧ್ಯೆ ಲಾರಿಯ ಟೈಯರ್ ಪಂಚರ್ ಆಗಿದೆ. ಈ ವೇಳೆ ತಮ್ಮ ವಾಹನವನ್ನು ರಸ್ತೆಯಂಚಿಗೆ ನಿಲ್ಲಿಸಿ ದುರಸ್ತಿ ಕಾರ್ಯ ನಡೆಸುತ್ತಿದ್ದಾಗ ವೇಗವಾಗಿ ಬಂದ ಇನ್ನೊಂದು ಟ್ಯಾಂಕರ್ ಲಾರಿಯ ಚಕ್ರಗಳು ರಸ್ತೆಯಂಚಿನಲ್ಲಿ ಪಂಕ್ಚರ್ ತೆಗೆಯುತ್ತಿದ್ದ ಲಾರಿ ಕ್ಲೀನರ್ ಬಸವರಾಜ ಮೇಲೆ ಹಾದು ಹೋಗಿದೆ ಎನ್ನಲಾಗಿದೆ.
ಅದರ ಪರಿಣಾಮ ಗಂಭೀರ ಗಾಯಗೊಂಡು ಆತ ಸ್ಥಳದಲ್ಲಿಯೇ ಮೃತಪಟ್ಟರೆ, ಪಕ್ಕದಲ್ಲಿಯೆ ಇದ್ದ ಲಾರಿ ಮಾಲಕ ಲಿಂಗರಾಜ್ನಿಗೂ ಟ್ಯಾಂಕರ್ ಲಾರಿ ಬಡಿದ ಪರಿಣಾಮ ಆತನ ಎಡ ಕಾಲಿಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸುವಂತಾಗಿದೆ.
ಅಪಘಾತ ನಡೆಸಿದ ಟ್ಯಾಂಕರ್ ಲಾರಿ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.ಅಂಬುಲೆನ್ಸ್ ವಾಹನದ ಮೂಲಕ ಗಾಯಾಳುವನ್ನು ಅಂಕೋಲಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಹಿಟ್ ಎಂಡ್ ರನ್ ಕೇಸ್ ದಾಖಲಾಗುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.