

ನೆಲ್ಯಾಡಿ: ನೆಲ್ಯಾಡಿ ವಿ.ವಿ. ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಆಯೋಜಿಸಲಾದ 2025–26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಏಪ್ರಿಲ್ 10ರಿಂದ 16ರವರೆಗೆ ಹಳ್ಳಿಂಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಇದರ ಸಮಾರೋಪ ಸಮಾರಂಭವು ಏಪ್ರಿಲ್ 16ರಂದು ನೆರವೇರಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ವಿ. ಕಾಲೇಜು ನೆಲ್ಯಾಡಿ ಸಂಯೋಜಕರಾದ ಡಾ. ಸುರೇಶ್ ಅವರು ವಹಿಸಿಕೊಂಡರು. ಮುಖ್ಯ ಅತಿಥಿಯಾಗಿ ಎನ್ಬಿಎಫ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ನಾಗೇಶ್ ಗೌಡ ಸ್ವಾಮಿಪ್ರಸಾದ್ ನಿಡ್ಲೆ ಅವರು ಭಾಗವಹಿಸಿ, ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು ಹಾಗೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಅತಿಥಿಗಳಾಗಿ ವಿ.ವಿ. ಕಾಲೇಜು ನೆಲ್ಯಾಡಿ ಅನುದಾನ ಸಮಿತಿ ಅಧ್ಯಕ್ಷೆ ಉಷಾ ಅಂಚನ್, ಹಳ್ಳಿಂಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನವಾಸ್, ಹಳ್ಳಿಂಗೇರಿ ಶಾಲೆಯ ಸ್ವಾಗತ ಸಮಿತಿ ಗೌರವಾಧ್ಯಕ್ಷ ಹಾಗೂ ವಿ.ವಿ. ಕಾಲೇಜು ನೆಲ್ಯಾಡಿ ಪಿಟಿಎ ಸಮಿತಿ ಅಧ್ಯಕ್ಷ ಉಮ್ಮರ್ ಬೈಲಂಗಡಿ, ನೆಲ್ಯಾಡಿ ವ್ಯಾಪಾರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಹಳ್ಳಿಂಗೇರಿ ಶಾಲೆಯ ನಿಕಟಪೂರ್ವ ಮುಖ್ಯ ಶಿಕ್ಷಕ ಶ್ರೀಧರ, ಹಳ್ಳಿಂಗೇರಿ ಶಾಲೆಯ ಮುಖ್ಯ ಶಿಕ್ಷಕ ರೊನಾಲ್ಡ್ ಕೆನ್ಯುಟ್ ಮೆನೆಜಸ್, ವಿ.ವಿ. ಕಾಲೇಜು ನೆಲ್ಯಾಡಿ ಅನುದಾನ ಸಮಿತಿ ಗೌರವ ಸಲಹೆಗಾರ ಪಿ.ಪಿ. ವರ್ಗೀಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅತಿಥಿಗಳು ತಮ್ಮ ಭಾಷಣಗಳಲ್ಲಿ ಶಿಬಿರಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ಸೇವಾಭಾವವನ್ನು ಪ್ರಶಂಸಿಸಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿಬಿರದ ಸಪ್ತದಿನಗಳ ಚಟುವಟಿಕೆಗಳ ಸಂಪೂರ್ಣ ವರದಿಯನ್ನು ಎನ್ಎಸ್ಎಸ್ ಯೋಜನಾಧಿಕಾರಿ ಶ್ರುತಿ ಅವರು ವಾಚಿಸಿದರು.
ಶಿಬಿರದ ಅವಧಿಯಲ್ಲಿ ಸ್ವಚ್ಛತಾ ಅಭಿಯಾನ, ಜಾಗೃತಿ ಕಾರ್ಯಕ್ರಮಗಳು, ಸಮಾಜಮುಖಿ ಸೇವೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಈ ಶಿಬಿರವು ತಮ್ಮಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರಶಂಸಿಸಿ, ಕೆಲವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಎಲ್ಲಾ ಅತಿಥಿಗಳು ತಮ್ಮ ಭಾಷಣದಲ್ಲಿ “ಕಾಲೇಜಿನ ಉಳಿವಿಗಾಗಿ ನಾವು ಎಲ್ಲರೂ ಶ್ರಮಿಸಬೇಕು” ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಉಪನ್ಯಾಸಕರಾದ ಡಾ. ಧರ್ಮರಾಯ ಅವರು ಮಾಡಿದರು. ಧನ್ಯವಾದವನ್ನು ಉಪನ್ಯಾಸಕರಾದ ಡಾ. ಸೀತಾರಾಮ ಪಿ. ಅವರು ಸಲ್ಲಿಸಿದರು. ನಿರೂಪಣೆಯನ್ನು ಪಾವನಾ ರೈ ಅವರು ನಿರ್ವಹಿಸಿದರು.
ವೇದಿಕೆಯಲ್ಲಿ ಶಿಬಿರದ ನಾಯಕರಾದ ನಿತೇಶ್ (ದ್ವಿತೀಯ ಬಿ.ಕಾಂ) ಹಾಗೂ ಐಶ್ವರ್ಯ (ದ್ವಿತೀಯ ಬಿ.ಕಾಂ) ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








