ಉತ್ತರ್ಕಾಶಿ: 16 ವರ್ಷಗಳ ಹಿಂದೆ ಪರ್ವತಾರೋಹಣ ಸಂದರ್ಭದಲ್ಲಿ ಮಿಸ್ ಆಗಿದ್ದ ಭಾರತದ ಸೇನಾ ಪಡೆಯ ಯೋಧನ ಮೃತದೇಹ ಮಂಜಿನಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಿಮಾಲಯದ ಗರ್ವಾಲ್ ಪ್ರದೇಶದ ಸತೋಪಂತ್ ಬಳಿ ಘಟನೆ ನಡೆದಿದೆ.
ಸಮುದ್ರ ಮಟ್ಟದಿಂದ ಸುಮಾರು 7,075 ಮೀಟರ್ ಎತ್ತರ ಪ್ರದೇಶದಲ್ಲಿ ಭಾರತ ಸೇನೆಯ ಪರ್ವತಾರೋಹಣ ತಂಡಕ್ಕೆ ಪರ್ವತಾರೋಹಣ ಮಾಡುವ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ವೇಳೆ ಮೃತದೇಹದ ಬಳಿ ಪರ್ವತಾರೋಹಣಕ್ಕೆ ಬಳಸುವ ವಸ್ತುಗಳು ಕೂಡ ಪತ್ತೆಯಾಗಿತ್ತು.
ಮೂಲಗಳ ಮಾಹಿತಿಯ ಅನ್ವಯ 16 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಉತ್ತರ ಪ್ರದೇಶದ ಯೋಧ ಅನಿಶ್ ತ್ಯಾಗಿ ಅವರು ನಾಪತ್ತೆಯಾಗಿದ್ದರು. ಸದ್ಯ ಪತ್ತೆಯಾಗಿರುವ ಮೃತದೇಹ 16 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧನದ್ದೇ ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಭಾರತದ ಯೋಧರು ಉತ್ತರ ಕಾಶಿ ಜಿಲ್ಲಾಸ್ಪತ್ರೆಗೆ ತಲುಪಿಸಿದ್ದಾರೆ. ವೈದ್ಯರು ಪರೀಕ್ಷೆ ನಡೆಸಲಿದೆ.. ಬಳಿಕ ಮೃತದೇಹದ ಸ್ಪಷ್ಟ ಗುರುತು ಪತ್ತೆಯಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಉತ್ತರಕಾಶಿ ಎಸ್ಪಿ ಮಣಿಕಂಠ್ ಮಿಶ್ರಾ, ಮೃತದೇಹದ ಡಿಎನ್ಎ ಪರೀಕ್ಷೆ ನಡೆದ ಬಳಿಕ ಖಚಿತ ಮಾಹಿತಿ ಲಭ್ಯವಾಗಲಿದೆ. ಸದ್ಯ ನಾವು ಯೋಧನ ಕುಟುಂಬವನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ವೈದ್ಯರು ಮೃತದೇಹವನ್ನು ಗುರುತಿಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡುತ್ತೇವೆ. ಎಲ್ಲಾ ಮಿಲಿಟರಿ ಗೌರವಗಳನ್ನು ಕೂಡ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
2005ರಲ್ಲಿ ಗಂಗೋತ್ರಿ ನ್ಯಾಷನಲ್ ಪಾರ್ಕ್ನ ಎರಡನೇ ಅತಿ ದೊಡ್ಡ ಪರ್ವತ ಶ್ರೇಣಿಯಲ್ಲಿ ಪರ್ವತರೋಹಣ ತಂಡ ತೆರಳಿತ್ತು. ಈ ವೇಳೆ ಪರ್ವತದ ತುದಿ ತಲುಪಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಯೋಧ ಮಿಸ್ ಆಗಿದ್ದರು. ಆಗ ಅವರ ರಕ್ಷಣೆ ಕಾರ್ಯಾಚರಣೆ ನಡೆಸಿದ್ದರು ಅದು ವಿಫಲವಾಗಿತ್ತು. ಕಳೆದ ಸೆ.16 ರಂದು ಬಾಂಗ್ಲಾದೇಶ ವಿಮೋಚನಾ ಯುದ್ಧ 50ನೇ ವಾರ್ಷಿಕೋತ್ಸವದ ನೆನಪಿಗಾಗಿ ಪರ್ವತಾರೋಹಣ ಏರ್ಪಡಿಸಲಾಗಿತ್ತು. ವಾಪಸ್ ಆಗುತ್ತಿದ್ದ ವೇಳೆ ಪರ್ವತರೋಹಣ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.