
ವಿಟ್ಲ: ನಾಗರಹಾವು ಕಡಿತಕ್ಕೊಳಗಾದ ಆಟೋ ಚಾಲಕರೊರ್ವರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಕುದ್ಕಾರ್ ಎಂಬಲ್ಲಿ ಜು.2ರಂದು ಬೆಳಿಗ್ಗೆ ಸಂಭವಿಸಿದೆ.ಸೆರ್ಕಳ ಕುದ್ಕಾರ್ ನಿವಾಸಿ ಸುಲೈಮಾನ್ ಎಂಬವರ ಪುತ್ರ, ಆಟೋ ಚಾಲಕ ಹಸೈನಾರ್ (50ವ.) ಮೃತಪಟ್ಟವರು.ಜು.2ರಂದು ಬೆಳಗ್ಗೆ ಹಸೈನಾರ್ ರವರು ತನ್ನ ಮನೆಯ ಪಕ್ಕದಲ್ಲಿ ಇಟ್ಟಿದ್ದ ಹುಲ್ಲು ತೆಗೆಯುವ ಯಂತ್ರವನ್ನು ಎತ್ತಲು ಮುಂದಾಗುತ್ತಿದ್ದಂತೆ ನಾಗರಹಾವೊಂದು ಅವರಿಗೆ ಕಡಿದಿದೆ. ಘಟನೆ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದ ಅವರನ್ನು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹಸೈನಾರ್ ಅವರು ಮೃತಪಟ್ಟರೆಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಉರಗ ರಕ್ಷಕ ಹೈದರ್ ರವರು ಸ್ಥಳಕ್ಕೆ ಆಗಮಿಸಿ, ಹುಲ್ಲಿನ ಯಂತ್ರದ ಬಳಿ ಅಡಗಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.








