
ಮುಝಾಫರ್ ನಗರ: ಉತ್ತರ ಪ್ರದೇಶದ ಮುಝಾಫರ್ ನಗರದ ಸರಕಾರಿ ಆಸ್ಪತ್ರೆಯಲ್ಲಿ ಲಂಚದ ಹಣ ನೀಡದ ಕಾರಣ ವೈದ್ಯರೊಬ್ಬರು ತಾನು ಚಿಕಿತ್ಸೆ ನೀಡಿದ್ದ ಬಾಲಕಿಯ ಕಾಲನ್ನು ಉದ್ದೇಶಪೂರ್ವಕವಾಗಿ ಮತ್ತೆ ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕಿಯ ತಾಯಿಯ ಬಳಿ ವೈದ್ಯರು ಶಸ್ತ್ರಚಿಕಿತ್ಸೆಗೆ ಒಟ್ಟು 25,000 ರೂ. ಲಂಚ ಕೇಳಿದ್ದರು. ಅದರಲ್ಲಿ ತಾಯಿ 8,000 ರೂ.ಗಳನ್ನು ಪಾವತಿಸಿದ್ದರು. ಉಳಿದ ಹಣವನ್ನು ಪಾವತಿಸದ ಕಾರಣ ತಪಾಸಣೆಗೆಂದು ಕರೆದು ಬಾಲಕಿಯ ಕಾಲನ್ನು ಮತ್ತೆ ಮರಿಯಲಾಗಿದೆ ಎಂದು ಆರೋಪಿಸಲಾಗಿದೆ.ವರದಿಗಳ ಪ್ರಕಾರ, ಸಂತ್ರಸ್ತ ಬಾಲಕಿ ಮಾನಸಿಕವಾಗಿ ಸ್ಥಿತಿಮಿತವನ್ನು ಹೊಂದಿಲ್ಲ. ತಾಯಿಗೆ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಉಚಿತ ಚಿಕಿತ್ಸೆ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಹಿಂದೆ ವೈದ್ಯರಿಗೆ ಸೂಚಿಸಿತ್ತು.
ಸಿಎಂಒ ಸೂಚನೆಯ ಹೊರತಾಗಿಯೂ, ವೈದ್ಯರು ಕುಟುಂಬದಿಂದ 25,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.ರೇಷ್ಮಾ ಎಂಬ ಮಹಿಳೆ ಇದೀಗ ನ್ಯಾಯ ಕೋರಿ ತನ್ನ 14 ವರ್ಷದ ಮಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದಾರೆ. ರೇಷ್ಮಾ ಹೇಳುವ ಪ್ರಕಾರ, ಸುಮಾರು ಒಂದೂವರೆ ತಿಂಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮಗಳ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಆಸ್ಪತ್ರೆಯ ಸಿಬ್ಬಂದಿ ಆರಂಭದಲ್ಲಿ ಶಸ್ತ್ರಚಿಕಿತ್ಸೆಗೆ 25,000 ರೂ. ಕೇಳಿದ್ದರು. ಆದರೆ ಪಾವತಿಸಲು ನನ್ನ ಬಳಿ ಇರಲಿಲ್ಲ. ಇದರಿಂದ ಚಿಕಿತ್ಸೆ ನಿರಾಕರಿಸಲಾಯಿತು. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿದ ಬಳಿಕ ಅವರು ಉಚಿತ ಚಿಕಿತ್ಸೆ ನೀಡುವಂತೆ ಮುಖ್ಯ ವೈದ್ಯಾಧಿಕಾರಿ (ಸಿಎಂಒ)ಗೆ ಸೂಚಿಸಿದರು. ಆದರೂ ಆಸ್ಪತ್ರೆ ಸಿಬ್ಬಂದಿ ಇನ್ನೂ 8,000 ರೂ. ಸಂಗ್ರಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವೈದ್ಯರು ಬಾಲಕಿಯನ್ನು ತಪಾಸಣೆಗೆಂದು ಕರೆದುಮೊಣಕಾಲನ್ನು ಬಲವಂತವಾಗಿ ಬಗ್ಗಿಸಿದರು,ಇದರಿಂದಾಗಿ ಅವಳು ನೋವಿನಿಂದ ಕಿರುಚಿದಳು.ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ವೈದ್ಯಾಧಿಕಾರಿ ಸುನಿಲ್ ತಿವಾರಿ, ಈ ಕುರಿತು ವಿವರವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.








