Monday, June 30, 2025
spot_imgspot_img
spot_imgspot_img

36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

- Advertisement -
- Advertisement -

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 36 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಗುಜರಾತ್‌ನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ 36 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗುಜರಾತಿ ಸಂಸ್ಕೃತಿಯ ಅವಲೋಕನವನ್ನು ಸಹ ಮಾಡಲಾಗಿದ್ದು, ಗರ್ಬಾ ಸೇರಿದಂತೆ ವಿವಿಧ ನೃತ್ಯಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಯಿತು. ಈ ಕ್ರೀಡಾ ಸ್ಪರ್ಧೆಗಳನ್ನು ಗುಜರಾತ್‌ನ ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರ ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಸೈಕ್ಲಿಂಗ್ ಸ್ಪರ್ಧೆಗಳು ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಲಿವೆ. ಈ ಸ್ಪರ್ಧೆಗಳು ಸುಮಾರು ಏಳು ವರ್ಷಗಳ ನಂತರ ನಡೆಯುತ್ತಿದ್ದು, 2015ರಲ್ಲಿ ಕೇರಳದಲ್ಲಿ ಕೊನೆಯ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು.

ಈ ಮಹಾನ್ ಯೋಜನೆ 100 ದಿನಗಳಲ್ಲಿ ಸಾಕಾರಗೊಂಡಿದೆ – ಮೋದಿ

ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇವಲ 100 ದಿನಗಳ ಗಡುವಿನ ಅವಧಿಯಲ್ಲಿ ಈ ಯೋಜನೆಯನ್ನು ಸಾಧ್ಯವಾಗಿಸಿದಕ್ಕೆ ಗುಜರಾತ್ ಸರ್ಕಾರವನ್ನು ಅಭಿನಂದಿಸಿದರು. ಜೊತೆಗೆ ಈ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣವು 8, 10 ಕ್ರೀಡೆಗಳು ಮಾತ್ರವಲ್ಲದೆ ಹಲವಾರು ಕ್ರೀಡೆಗಳನ್ನು ಏಕಕಾಲದಲ್ಲಿ ಆಯೋಜಿಸುವ ದೇಶದ ಮೊದಲ ಕ್ರೀಡಾ ಆವರಣವಾಗಿದೆ ಎಂದರು.

ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣ ಮತ್ತು ಎನ್ಕ್ಲೇವ್ ವಿಶಿಷ್ಟವಾಗಿದೆ. ಇಲ್ಲಿ ಫುಟ್ಬಾಲ್, ಹಾಕಿ, ಬಾಸ್ಕೆಟ್ ಬಾಲ್, ಕಬಡ್ಡಿ, ಬಾಕ್ಸಿಂಗ್, ಲಾನ್ ಟೆನ್ನಿಸ್ ಮುಂತಾದ ಹಲವು ಕ್ರೀಡೆಗಳ ಸೌಲಭ್ಯಗಳು ಏಕಕಾಲದಲ್ಲಿ ಲಭ್ಯವಿವೆ. ಇದು ಇಡೀ ದೇಶಕ್ಕೆ ಮಾದರಿ. ಇಂತಹ ಮೂಲಸೌಕರ್ಯಗಳು ಇದ್ದಾಗ ಆಟಗಾರರ ಮನೋಬಲವೂ ದ್ವಿಗುಣಗೊಳ್ಳುತ್ತದೆ. ಅಲ್ಲದೆ ಈ ಸಂಕೀರ್ಣದ ಸಂಪೂರ್ಣ ಪ್ರಯೋಜನವನ್ನು ಆಟಗಾರರು ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಕ್ರೀಡೆಗಳು ದೇಶದ ಇಮೇಜ್ ಬದಲಾಗುತ್ತದೆ- ಪ್ರಧಾನಿ

8 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಗೇಮ್ಸ್​ಗಳಲ್ಲಿ ಭಾರತೀಯ ಆಟಗಾರರು ಕೇವಲ 20 ರಿಂದ 25 ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಇಂದು ಭಾರತದ ಆಟಗಾರರು 40 ರಿಂದ 45 ಗೇಮ್ಸ್​ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದರಿಂದ ಭಾರತೀಯ ಕ್ರೀಡಾಪಟುಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಪದಕಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ನಮ್ಮ ಸರ್ಕಾರ ಆಟಗಾರರಿಗೆ ಸೌಲಭ್ಯ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಆಟಗಾರರ ತರಬೇತಿಗೆ ಮಿಷನ್ ಮೋಡ್ ಕೂಡ ಮಾಡಲಾಗುತ್ತಿದೆ. ಇಂದು ನಮ್ಮ ಆಟಗಾರರು ಪ್ರತಿಯೊಂದು ಕ್ರೀಡೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಆಟಗಾರರು ಸಹ ತಮ್ಮದೇ ಆದ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಟೋಕಿಯೊ ಒಲಿಂಪಿಕ್​ನಲ್ಲಿ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು. ಆ ನಂತರ ಭಾರತ ಥಾಮಸ್ ಕಪ್ ಕೂಡ ಗೆದ್ದಿತ್ತು. ಜೊತೆಗೆ ವನಿತೆಯರು ಕೂಡ ಅಂತಾರಾಷ್ಟ್ರೀಯ ಕ್ರೀಡಾಕೂಟಡದಲ್ಲಿ ಭಾರತದ ಹಿರಿಮೆಯನ್ನು ಎತ್ತಿಹಿಡಿಯುತ್ತಿದ್ದಾರೆ ಎಂದರು.

ಸ್ಪರ್ಧೆಯಲ್ಲಿ ಗೆಲ್ಲಲು ಬದ್ಧತೆ ಮತ್ತು ನಿರಂತರತೆ ಬಹಳ ಅವಶ್ಯಕ- ಪ್ರಧಾನಿ

ಸ್ಪರ್ಧೆಯನ್ನು ಗೆಲ್ಲಬೇಕಾದರೆ ಬದ್ಧತೆ ಮತ್ತು ನಿರಂತರತೆಯನ್ನು ಮೈಗೂಡಿಸಿಕೊಳ್ಳಬೇಕು. ಆಟದಲ್ಲಿ ಸೋಲನ್ನು ಎಂದಿಗೂ ಅಂತಿಮ ಎಂದು ಪರಿಗಣಿಸಬಾರದು. ಎಲ್ಲಿ ವೇಗವಿದೆಯೋ ಅಲ್ಲಿ ಪ್ರಗತಿ ಇರುತ್ತದೆ. ಈ ವೇಗವು ನಿಮ್ಮ ಜೀವನದ ಧ್ಯೇಯವಾಗಿರಬೇಕು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಿಮ್ಮ ಗೆಲುವು ದೇಶಕ್ಕೆ ಸಂಭ್ರಮಿಸಲು ಅವಕಾಶ ನೀಡುವುದಲ್ಲದೆ ಭವಿಷ್ಯಕ್ಕೆ ಹೊಸ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದರು.

6 ನಗರಗಳಲ್ಲಿ ಆಯೋಜನೆ

ರಾಜ್ಯದ 6 ನಗರಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲಾಗಿದೆ. ರಾಜ್ಯದ ಅಹಮದಾಬಾದ್, ಗಾಂಧಿನಗರ, ಸೂರತ್ ವಡೋದರಾ, ರಾಜ್ ಕೋಟ್ ಮತ್ತು ಭಾವನಗರದಲ್ಲಿ ಇಂದು ರಾಷ್ಟ್ರೀಯ ಕ್ರೀಡಾಕೂಟ ಆರಂಭವಾಗಲಿದ್ದು, 12 ದಿನಗಳ ಕಾಲ ನಡೆಯಲಿದೆ. ಈ ಕ್ರೀಡಾ ಹಬ್ಬದಲ್ಲಿ ದೇಶದ 37 ತಂಡಗಳ 7000ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದಾರೆ. ಅಕ್ಟೋಬರ್ 10 ರಂದು ಸಮಾರೋಪ ಸಮಾರಂಭ ನಡೆಯಲಿದ್ದರೂ ಕ್ರೀಡೋತ್ಸವ ಅಕ್ಟೋಬರ್ 12 ರವರೆಗೆ ನಡೆಯಲಿದೆ.

- Advertisement -

Related news

error: Content is protected !!