55 ವರ್ಷದ ವ್ಯಕ್ತಿಯನ್ನು ಸತ್ತಿದ್ದಾನೆ ಎಂದು ಭಾವಿಸಿ ಆತನನ್ನು ಭಾನುವಾರ ಸಂಜೆ ಕುಟುಂಬಸ್ಥರು ಮಣ್ಣು ಮಾಡಿ ಬಂದಿದ್ದರು. ಆದರೆ, ಮೃತ ವ್ಯಕ್ತಿ ಸೋಮವಾರ ಸಂಜೆ ಮನೆಗೆ ಮರಳಿದ್ದು, ಆತನನ್ನು ನೋಡಿ ಕುಟುಂಬಸ್ಥರೆಲ್ಲ ಆಘಾತಕ್ಕೆ ಒಳಗಾಗಿದ್ದಾರೆ. ಈ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯ ಬನಗಲದಪುರದಲ್ಲಿ ನಡೆದಿದೆ.
ದಿನಗೂಲಿ ನೌಕರನಾಗಿರುವ ಮೂರ್ತಿ ಕೆಲವು ದಿನಗಳ ಹಿಂದೆ ಕಬ್ಬು ಕಟಾವು ಮಾಡಲೆಂದು ತಿರ್ಪೂರ್ಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ಸಂಬಂಧಿಕರಿಂದ ಮೂರ್ತಿ ಪುತ್ರ ಕಾರ್ತಿ ಕರೆ ಸ್ವೀಕರಿಸಿದ್ದ. ಬಸ್ ನಿಲ್ದಾಣದ ಹತ್ತಿರ ನಿಮ್ಮ ತಂದೆಯ ಶವ ಪತ್ತೆಯಾಗಿದೆ ಎಂದು ಹೇಳುವುದನ್ನು ಕೇಳಿ ಶಾಕ್ ಆಗಿದ್ದ. ಬಳಿಕ ಸ್ಥಳಕ್ಕೆ ಧಾವಿಸಿ ಬಂದ ಪುತ್ರ ಅದು ತನ್ನ ತಂದೆಯ ಮೃತದೇಹ ಎಂದು ಖಚಿತಪಡಿಸಿದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಸತ್ಯಮಂಗಲಂ ಠಾಣಾ ಪೊಲೀಸರು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡುತ್ತಾರೆ. ಬಳಿಕ ಕುಟುಂಬಸ್ಥರು ಭಾನುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇದಾದ ಮಾರನೇ ದಿನ ಅಂದರೆ ಸೋಮವಾರ ಸಂಜೆ ಮೂರ್ತಿ ಮನೆಗೆ ಬಂದಿದ್ದನ್ನು ನೀಡಿ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ. ಇದಾದ ಬಳಿಕ ಕಾರ್ತಿ ಮತ್ತೆ ಪೊಲೀಸರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಇದೀಗ ಮೊದಲು ಪತ್ತಯಾಗಿದ್ದ ವ್ಯಕ್ತಿಯ ಮೃತದೇಹ ಯಾರದ್ದು ಎಂದು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೀಗ ಈರೋಡ್ ಜಿಲ್ಲೆಯಲ್ಲಿ ಈ ವಿಚಾರ ಬಹಳ ಚರ್ಚೆಯಾಗುತ್ತಿದೆ.