8 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ನವವಿವಾಹಿತೆ ನೇಣಿಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ, ವೆಂಕಟಗಿರಿಕೋಟೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ನಿವಾಸಿಯಾದ ಮುಸ್ಕಾನ್ ತಾಜ್ ಎಂಬುವವರು ತಂದೆ-ತಾಯಿಯನ್ನು ದಿಕ್ಕರಿಸಿ ಪ್ರೇಮ ವಿವಾಹವಾಗಿದ್ದರು. ಆಜಾಮ್ ಎಂಬ ಯುವಕನ್ನು ಪ್ರೀತಿಸಿ, ಕೊನೆಗೆ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದರು. ಆದ್ರೆ, ಇನ್ನೂ ಮದುವೆಯಾಗಿ ಈಗ ತಾನೆ 8 ತಿಂಗಳ ಆಗಿತ್ತು. ಆಗಲೇ ಗಂಡನ ಮನೆಯಲ್ಲಿ ಮುಸ್ಕಾನ್ ತಾಜ್ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಇನ್ನು ಯುವಕ ಆಜಾಮ್, ಪ್ರೋಗ್ರಾಮ್ಗಳಲ್ಲಿ ತಮಟೆ ಬಾರಿಸಿ ಜೀವನ ಮಾಡುತ್ತಿದ್ದ. ಇಬ್ಬರು ಹಠಕ್ಕೆ ಬಿದ್ದು ಪ್ರೀತಿ-ಪ್ರೇಮ ಎಂದು ಸುತ್ತಾಡಿದ ಕಾರಣ ತಮ್ಮ ಮಗಳು ಸುಖವಾಗಿರಲೆಂದು ಭಾವಿಸಿದ ಯುವತಿಯ ಪೋಷಕರು, ಮಗಳಿಗೆ ಎಲ್ಲಾ ರೀತಿಯ ಮನೆ ಬಳಕೆ ವಸ್ತುಗಳನ್ನು ನೀಡಿ ಚಿಂತಾಮಣಿಯ ಮಸೀದಿಯೊಂದರಲ್ಲಿ ಸರಳವಾಗಿ ವಿವಾಹ ಮಾಡಿದ್ದರು. ಮದುವೆಯಾದ ಹೊಸತರಲ್ಲಿ ಊಟಿ , ಕೊಡೈಕೆನಾಲ್, ಹೊಗೇನಕಲ್ ಎಂದು ಸುತ್ತಾಡಿದ್ದ ಜೋಡಿ. ಜಾಲಿಯಾಗಿ ಜೀವನ ನಡೆಸಿದ್ದರು.
ಹೀಗೆ ಅನ್ಯೂನ್ಯವಾಗಿದ್ದ ಜೋಡಿಗಳ ಮಧ್ಯೆ ಇತ್ತೀಚೆಗೆ ಐನೂರು ರೂಪಾಯಿ ಹಣಕ್ಕಾಗಿ ಮನಸ್ತಾಪ ಉಂಟಾಗಿತ್ತು. ಅದೇ ವಿಚಾರ ದೊಡ್ಡದಾಗಿ ಬೆಳೆದು ಕುಟುಂಬ ಕಲಹಕ್ಕೂ ಕಾರಣವಾಗಿತ್ತಂತೆ. ಇದೇ ವಿಚಾರದಿಂದ ನೊಂದು ತಮ್ಮ ಮಗಳು ಮೃತಪಟ್ಟಿದ್ದು, ಅದಕ್ಕೆ ಆಕೆಯ ಗಂಡನೆ ಕಾರಣ ಎಂದು ಮೃತಳ ಪೋಷಕರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಓದುವ ವಯಸ್ಸಿನಲ್ಲಿ ಪ್ರೀತಿಸಿ ವಿವಾಹವಾಗಿದ್ದ ಮುಸ್ಕಾನ್ ತಾಜ್, ಕ್ಷುಲ್ಲಕ ಕಾರಣಕ್ಕೆ ಗಂಡನ ಜೊತೆ ಮನಸ್ಥಾಪ ಮಾಡಿಕೊಂಡು ಸಾವಿನ ಮನೆ ಸೇರಿದ್ದು ಮಾತ್ರ ವಿಪರ್ಯಾಸವೆ ಸರಿ.