ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ 9 ತಿಂಗಳ ಮಗುವಿಗೆ ನೇಣುಬಿಗಿದು ಸಾಯಿಸಿ ನಂತರ ತಾಯಿಯೂ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.
ಮೃತರನ್ನು ನಿಖಿತಾ (25) ಹಾಗೂ ಅನೀಶ್ (9 ತಿಂಗಳು) ಎಂದು ಗುರುತಿಸಲಾಗಿದೆ. ನಿಖಿತಾ ಅವರ ವಿವಾಹವು ಕಳೆದ ವರ್ಷ ದಾವಣಗೆರೆ ಮೂಲದ ಇಂಜಿನಿಯರ್ ಮನೋಜ್ ಕುಮಾರ್ ಜತೆ ನಡೆದಿತ್ತು. ಮನೋಜ್ ದಾವಣಗೆರೆ ಪಾಲಿಕೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಆದರೆ ದಂಪತಿ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ.ನಿಖಿತಾ ಅವರು ತವರಿಗೆ ವಾಪಸಾಗಿ ಅಮ್ಮನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಇವರ ತಂದೆ-ತಾಯಿ ಇಬ್ಬರೂ ಶಿಕ್ಷಕರು. ಅವರು ಶಾಲೆಗೆ ಹೋದಾಗ ಮಗುವಿಗೆ ನೇಣು ಹಾಕಿ ನಂತರ ತಾವು ಮೃತಪಟ್ಟಿದ್ದಾರೆ.
ಪಾಲಕರು ಮನೆಗೆ ಬಂದಾಗ ವಿಷಯ ತಿಳಿದಿದೆ. ಮಗಳಿಗೆ ಆರು ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಚಿನ್ನಾಭರಣ ಕೊಟ್ಟು ಮದುವೆ ಮಾಡಿದ್ದೆವು. ಆದರೆ ಇನ್ನೂ ಅಳಿಯನ ಹಣದ ದಾಹ ತೀರಿರಲಿಲ್ಲ. ಮಗಳಿಗೆ ಚಿತ್ರಹಿಂಸೆ ಕೊಡುತ್ತಿದ್ದ ಎಂದು ನಿಖಿತಾ ಪಾಲಕರು ಆರೋಪಿಸಿದ್ದಾರೆ. ಹಿಂಸೆ ತಾಳದೇ ಮಗಳು ಮನೆಗೆ ವಾಪಸಾಗಿದ್ದಳು. ಅಳಿಯ ಮಾತ್ರ ತನ್ನ ತಾಯಿಯ ಮಾತು ಕೇಳಿ ದಿನನಿತ್ಯ ಫೋನಿನಲ್ಲಿಯೂ ಹಿಂಸೆ ಕೊಡುತ್ತಿದ್ದ. ಇದರಿಂದ ಮಗಳು ಇಂಥ ಕೃತ್ಯ ಎಸಗಿದ್ದಾಳೆ ಎಂದು ಕಣ್ಣೀರಿಡುತ್ತಿದ್ದಾರೆ. ಜಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.