


ಮಂಗಳೂರು: ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಜೆಪ್ಪು ಬಪ್ಪಾಲ್ ರಸ್ತೆ ಸಮೀಪ ನಡೆದಿದೆ.
ಪ್ರತ್ಯುಶ್ ಸಾಲಿಯಾನ್ ಎಂಬಾತನಿಗೆ ಸಂಜಯ್ ಪೂಜಾರಿ ಎಂಬಾತ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆನ್ಲೈನ್ ಗೇಮ್ನಲ್ಲಿ ಸೋಲಿಸಿದ ದ್ವೇಷದಿಂದ ಪ್ರತ್ಯುಶ್ ಸಾಲಿಯಾನ್ ನನ್ನು ಸಂಜಯ್ ಪೂಜಾರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ ಎಂದು ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಜಪ್ಪು ಬಪ್ಪಾಲ್ನ ನಿವಾಸಿಯಾಗಿರುವ ಪ್ರತ್ಯುಶ್ ಸಾಲಿಯಾನ್ ಆರೋಪಿ ಸಂಜಯ್ ಪೂಜಾರಿಯನ್ನು ‘ಫೀಫೈರ್’ ಮೊಬೈಲ್ ಆನ್ಲೈನ್ ಗೇಮ್ನಲ್ಲಿ ಸೋಲಿಸಿದ್ದ ಎನ್ನಲಾಗಿದೆ. ಹೀಗಾಗಿ ಪ್ರತ್ಯುಶ್ನ ಮೇಲೆ ಆರೋಪಿ ಸಂಜಯ್ ದ್ವೇಷ ಸಾಧಿಸಿದ್ದ ಎಂದು ಹೇಳಲಾಗಿದೆ.
ಮೇ 17ರಂದು ಸಂಜೆ 3.40ಕ್ಕೆ ಪ್ರತ್ಯುಶ್ ನಂದಿಗುಡ್ಡೆ, ಕಡೆಗೆ ಹೋಗುತ್ತಿದ್ದಾಗ, ಜೆಪ್ಪು ಬಪ್ಪಾಲ್ ರಸ್ತೆ ಸಮೀಪ ಸ್ಕೂಟರ್ನಲ್ಲಿ ಕುಳಿತಿದ್ದ ಆರೋಪಿ ಸಂಜಯ್ ಅವಾಚ್ಯ ಶಬ್ದದಿಂದ ತನಗೆ ಬೈದು ಚೂರಿಯಿಂದ ಎದೆಗೆ ಇರಿಯಲು ಯತ್ನಿಸಿದ ಎಂದು ದೂರಿನಲ್ಲಿ ತಿಳಿಲಾಗಿದೆ. ಪ್ರತ್ಯುಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.