ರೇಲ್ವೆ ಇಲಾಖೆಯಲ್ಲಿ ಸರಕಾರಿ ಕೆಲಸ ಕೊಡಿಸುವ ನೆಪದಲ್ಲಿ ಲಕ್ಷ ಲಕ್ಷ ವಂಚನೆ ಮಾಡಿದ ಘಟನೆ ಹೊಸನಗರ ತಾಲೂಕಿನ ರಿಪ್ಪನಪೇಟೆ ಪಟ್ಟಣದಲ್ಲಿ ನಡೆದಿದೆ. ಮಹಿಳೆಯ ಬಣ್ಣದ ಮಾತು ನಂಬಿದ ಯುವಕರು ಲಕ್ಷಾಂತರ ರೂಪಾಯಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಸರಕಾರಿ ಕೆಲಸ ಮತ್ತು ಟೆಂಡರ್ ಕೊಡಿಸುವುದಾಗಿ ಮಹಿಳೆಯು ಮೂವರಿಗೆ ಬರೊಬ್ಬರಿ 14 ಲಕ್ಷ ರೂಪಾಯಿ ಟೋಪಿ ಹಾಕಿದ್ದಾಳೆ. ಹೊಸನಗರ ತಾಲೂಕಿನ ರಿಪ್ಪನಪೇಟೆ ಪಟ್ಟಣದ ಶ್ವೇತಾ ಎಂಬ ಮಹಿಳೆಯು ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ಮಹಿಳೆಗೆ ಒಂದು ಮಗು ಕೂಡ ಇದ್ದು, ಪತಿಯ ಜೊತೆ ಡೈವರ್ಸ್ ಆಗಿದೆ. ಈ ನಡುವೆ ತನ್ನ ಪತಿ ಪ್ರಶಾಂತ ದೇಶಪಾಂಡೆ ರೇಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ರೇಲ್ವೆ ಇಲಾಖೆಯ ಪತಿಯ ಐಡಿ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಯುವಕರಿಗೆ ತೋರಿಸಿದ್ದಾರೆ. ಯುವಕರು ಇವರ ಬಣ್ಣದ ಮಾತಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ರೇಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ರಿಪ್ಪನಪೇಟೆಯ ಅರ್ಜುನ್ , ನವೀನ್ ಮತ್ತು ಆದರ್ಶ ಮೂವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ 14 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಇತ್ತ ಅನೇಕ ಬಾರಿ ಶ್ವೇತಾ ಮನೆ ಬಾಗಿಲಿಗೆ ಹೋದರೆ ನೂರೆಂಟು ಸುಳ್ಳು ಹೇಳುತ್ತಿದ್ದು ಇದೀಗ ಕೆಲಸವು ಇಲ್ಲದೇ, ಕೊಟ್ಟ ಹಣವು ಇಲ್ಲದೇ ಯುವಕರು ಆತಂಕಗೊಂಡಿದ್ದಾರೆ. ವಂಚಕಿ ಶ್ವೇತಾ ಮಹಿಳೆಯ ಬಳಿ ತಾನು ಕೊಟ್ಟಿರುವ ಹಣ ವಾಪಸ್ ಕೇಳಿದರೆ ಹಣ ಕೊಡದೇ ಸತಾಯಿಸುತ್ತಿದ್ದಾಳೆ. ಅಲ್ಲದೇ ಹಣ ಕೇಳಿದರೆ ನಿನ್ನ ಮೇಲೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳಂತೆ. ಈ ಕುರಿತು ವಂಚನೆಗೊಳಗಾದ ಆದರ್ಶ ಮತ್ತು ನವೀನ್ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.