ಮಂಗಳೂರು: ಕೋವಿಡ್–19 ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಬಸ್ಗಳ ಮಾಲೀಕರು, ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳಲು ಬಸ್ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸುತ್ತಿದ್ದಾರೆ. ನಾಲ್ಕು ತಿಂಗಳಲ್ಲಿ 12 ಸಾವಿರ ಬಸ್ಗಳನ್ನು ಇಲಾಖೆಗೆ ಒಪ್ಪಿಸಲಾಗಿದೆ.
ಪ್ರಯಾಣಿಕರಿಲ್ಲದ ಕಾರಣ ಬಸ್ ಗಳನ್ನು ರಸ್ತೆಗಿಳಿಸಲು ಹೆದರುತ್ತಿರುವ ಮಾಲೀಕರು, ಈ ಮಾರ್ಗ ಅನುಸರಿಸುತ್ತಿದ್ದಾರೆ. ಕೋವಿಡ್ಗೆ ಹೆದರಿ ಬಹಳಷ್ಟು ಜನರು ಸ್ವಂತ ವಾಹನದಲ್ಲೇ ಸಂಚರಿಸುತ್ತಿದ್ದು, ಬಸ್ಗಳಲ್ಲಿ ಜನರ ಸಂಚಾರ ಕಡಿಮೆಯಾಗಿದೆ.
ಈಗಾಗಲೇ ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ, ದಿನಕ್ಕೆ ರೂ. 8 ಸಾವಿರ ಸಂಪಾದನೆ ಮಾಡುತ್ತಿದ್ದ ಬಸ್ಗಳಲ್ಲಿ ರೂ.4 ಸಾವಿರವನ್ನೂ ಗಳಿಸಲು ಆಗುತ್ತಿಲ್ಲ. ಇದು ಇಂಧನ ವೆಚ್ಚಕ್ಕೂ ಸಾಕಾಗುತ್ತಿಲ್ಲ’ ಎಂದು ಕರ್ನಾಟಕ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ ತಿಳಿಸಿದ್ದಾರೆ.
‘ಬಸ್ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂಬುದಕ್ಕೆ ದಾಖಲೆ, ನೋಂದಣಿ ಪತ್ರ ಸೇರಿ ಎಲ್ಲ ದಾಖಲೆಗಳನ್ನು ಸಾರಿಗೆ ಇಲಾಖೆಗೆ ನೀಡಬೇಕು. ಇಷ್ಟು ಮಾಡಿದರೆ, ಮೂರು ತಿಂಗಳಿಗೊಮ್ಮೆ ಪಾವತಿಸಬೇಕಾದ ₹48 ಸಾವಿರದಿಂದ ₹2 ಲಕ್ಷದವರೆಗಿನ ತೆರಿಗೆ ಉಳಿಯಲಿದೆ. ಸಾರಿಗೆ ಇಲಾಖೆಗೆ ಒಪ್ಪಿಸುವುದನ್ನು ಬಿಟ್ಟು ಬೇರೆ ದಾರಿ ಕಾಣಿಸುತ್ತಿಲ್ಲ’ ಎಂದು ಹೇಳಿದ್ದಾರೆ.
‘ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ 50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಹಾಗಾಗಿ ಬಸ್ ಕಾರ್ಯಾಚರಣೆ ಕಷ್ಟ. ಟ್ಯಾಕ್ಸಿ ಚಾಲಕರು ಕೂಡ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಟ್ಯಾಕ್ಸಿ ಮಾಲೀಕರ ಹಿತವನ್ನು ಸರ್ಕಾರ ಕಾಪಾಡಬೇಕು’ ಎಂದು ಕರ್ನಾಟಕ ಪ್ರವಾಸಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಆಗ್ರಹಿಸಿದ್ದಾರೆ.