ಮೊಮ್ಮಗನೇ ಚಾಕುವಿನಿಂದ ಇರಿದು ಅಜ್ಜನನ್ನು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಕಲಬುರಗಿ ತಾಲ್ಲೂಕಿನ ಕುಮಸಿ ಗ್ರಾಮದಲ್ಲಿ ನಡೆದಿದೆ. 75 ವರ್ಷದ ಸಿದ್ರಾಮಪ್ಪ ಕಾಮನ್ ಕೊಲೆಯಾದ ದುರ್ದೈವಿ. ಸಿದ್ರಾಮಪ್ಪನ ಮೊಮ್ಮಗ ಆಕಾಶ್ ಕಾಮನ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಹತ್ಯೆಯಾಗಿರುವ ಅಜ್ಜ ಸಿದ್ದರಾಮಪ್ಪ ಕಲಬುರಗಿ ಜಿಲ್ಲೆಯ ಜವಳಗಾ (ಬಿ) ಗ್ರಾಮದ ನಿವಾಸಿ. ನಿನ್ನೆ ಸಿದ್ರಾಮಪ್ಪ ಸಹೋದರಿ ಸಾವಿನ ಹಿನ್ನೆಲೆ ಮನೆಯ ಸದಸ್ಯರೆಲ್ಲಾ ಕಲಬುರಗಿ ತಾಲ್ಲೂಕಿನ ಕುಮಸಿ ಗ್ರಾಮಕ್ಕೆ ತೆರಳಿದ್ದರು. ವಾಪಸ್ ಬರುವಾಗ ಆಕಾಶ್ ತಾಯಿ ಸರೋಜಾ, ಸಿದ್ರಾಮಪ್ಪ ಮಧ್ಯೆ ವಾಗ್ವಾದ ನಡೆದಿದೆ.
ಕ್ರೂಸರ್ನಲ್ಲಿ ವಾಪಸ್ ಬರುವಾಗ ಸರೋಜಾ, ಸಿದ್ರಾಮಪ್ಪನನ್ನ ಗಾಡಿಯ ಮೇಲೆ ಕೂರುವಂತೆ ಹೇಳಿದ್ದರು. ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದಕ್ಕೆ ಸಿದ್ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಸರೋಜಾ ತನ್ನ ಮಗನಿಗೆ ಅಜ್ಜ ಬೈದಿರುವ ವಿಚಾರ ಹೇಳಿದ್ದಾರೆ.
ಅಜ್ಜ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರೋದಕ್ಕೆ ರೊಚ್ಚಿಗೆದ್ದ ಮೊಮ್ಮಗ ಆಕಾಶ್ ಕಾಮನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕಲಬುರಗಿಯ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.